ಸದಾಶಿವನಗರಕ್ಕೆ ಶನಿವಾರ ರಾಜಸ್ತಾನದ ಗೆಟಪ್. ಬಿಳಿಯ ಪಂಚೆ, ಬಿಳಿಯ ಅಂಗಿ, ತಲೆಗೆ ಬಣ್ಣಬಣ್ಣದ ಮುಂಡಾಸು ಸುತ್ತಿದ ಗಂಡಸರದ್ದೇ ಓಡಾಟ. ಬಂದವರಿಗೆಲ್ಲಾ ಡ್ರೈಫ್ರೂಟ್ಸ್, ಎಳನೀರು ಪಾನಕದ ಸ್ವಾಗತ. ವಿವಿಧ ವರ್ಣದ ಸೀರೆ ಉಟ್ಟು, ಸೆರಗನ್ನು ತಲೆಯ ಮೇಲೆ ಹೊದ್ದ ಸ್ನಿಗ್ಧ ಸೌಂದರ್ಯದ ನೀರೆಯರು. ಸುತ್ತ ಕಣ್ಣಾಡಿಸಿದರೆ ಆಭರಣಗಳ ಕಾರುಬಾರು.
ಸದಾಶಿವನಗರದ ಭಾಷ್ಯಂ ಸರ್ಕಲ್ ಬಳಿ ಇರುವ `ಶ್ರೀ ಗಣೇಶ ಡೈಮಂಡ್ಸ್ ಅಂಡ್ ಜ್ಯುವೆಲ್ಲರಿ' ಮಳಿಗೆ ಯುಗಾದಿ ಆಭರಣಗಳನ್ನು ಪರಿಚಯಿಸಲು ನಡೆಸಿದ ಫ್ಯಾಷನ್ ಶೋ ಕಾರ್ಯಕ್ರಮದ ಚಿತ್ರಣವಿದು.
ನಡುಮನೆಯಲ್ಲಿ ಆಭರಣ ತೊಟ್ಟ ಮಾಡೆಲ್ಗಳ ರ್ಯಾಂಪ್ವಾಕ್ ನಡೆಯುತ್ತಿತ್ತು. ಅಂಚಿನಲ್ಲಿದ್ದ ಕ್ಯಾಮೆರಾ ಮುಂದೆ ಬರುತ್ತಿದ್ದಂತೆ ಮಾಡೆಲ್ಗಳು ತಾವು ತೊಟ್ಟಿದ್ದ ಬಳೆ, ಸರ, ಡಾಬು, ಕಿವಿಯೋಲೆಗಳನ್ನು ಬಾಗುತ್ತಾ ಬಳುಕುತ್ತಾ ತೋರಿಸಲಾರಂಭಿಸಿದರು. ಎತ್ತರದ ಚಪ್ಪಲಿಯಲ್ಲಿ ಬೆಕ್ಕಿನ ಹೆಜ್ಜೆ ಇಡುತ್ತಿದ್ದ ಮಾಡೆಲ್ಗಳಿಗೆ ಸೀರೆ ಕೊಂಚ ಕಿರಿಕಿರಿ ಉಂಟುಮಾಡಿದಂತೆ ತೋರುತ್ತಿತ್ತು. ಆಗಾಗ ನಿಧಾನವಾಗಿ, ಬಹು ಬೇಗನೆ ನಡೆಯುತ್ತಾ ಕಷ್ಟ ಪಡುತ್ತಿದ್ದುದು ತಿಳಿಯುತ್ತಿತ್ತು. ಆದರೆ ಸೊಂಟ ಬಳುಕಿಸುತ್ತಾ ಹೊಕ್ಕಳು ತೋರುತ್ತಾ ಹೂನಗೆ ಬೀರಿದ ಮಾಡೆಲ್ಗಳಿಗೇ ಹೆಚ್ಚಿನ ಚಪ್ಪಾಳೆ ಸಿಕ್ಕಿದ್ದು.ರ್ಯಾಂಪ್ ಮಾಡಿ ವಾಪಸ್ ಹೋಗುವಾಗ ಆವರಿಸಿದ್ದ ಕೂದಲನ್ನು ಸರಿಸಿ ತೆರೆದ ಬೆನ್ನನ್ನು ತೋರಿದಾಗಲಂತೂ ಎಲ್ಲರಲ್ಲೂ ಮಿಂಚಿನ ಸಂಚಾರ.
ಹಸಿರು, ಕೆಂಪು, ನೀಲಿ ಸೀರೆಯಲ್ಲಿ ಮಿಂಚಿದ ಈ ನೀರೆಗಳು ಕ್ಯಾಮೆರಾ ಕಣ್ಣಲ್ಲಿ ತುಂಬಿಕೊಳ್ಳುತ್ತಿದ್ದಂತೆ ಪಕ್ಕದಲ್ಲಿ ನಿಂತ ವಯಸ್ಕರೊಬ್ಬರು ಮಾತಿಗೆ ಶುರು ಹಚ್ಚಿಕೊಂಡರು. `ಇವರೆಲ್ಲಾ ತುಂಬಾ ತೆಳ್ಳಗಿದ್ದಾರೆ. ಊಟ ಮಾಡೋದೇ ಇಲ್ಲ ಎಂದೆನಿಸುತ್ತದೆ. ಇಷ್ಟೊಂದು ತೆಳ್ಳಗಿದ್ದರೆ ಯಾಕೋ ಖುಷಿ ಎನಿಸುವುದೇ ಇಲ್ಲ. ತಿಂದುಂಡು ದಪ್ಪಗಾದರೆ ಚೆಂದವೇ ಬೇರೆ' ಎಂದು ಯಾರೂ ಕೇಳದ ಪ್ರಶ್ನೆಗೆ ವ್ಯಾಖ್ಯಾನ ನೀಡಿದರು.
`ಸುಮಾರು 40 ವರ್ಷದಿಂದ ನಮ್ಮ ಕುಟುಂಬ ಇದೇ ಉದ್ಯಮದಲ್ಲಿ ತೊಡಗಿಕೊಂಡಿದೆ. ರಾಜಾಜಿನಗರದಲ್ಲೂ ನಮ್ಮ ಮಳಿಗೆ ಇದೆ. ಯುಗಾದಿ ಹಬ್ಬ ಭಾರತೀಯರಿಗೆ ವಿಶೇಷ. ಹೀಗಾಗಿ ವಿನೂತನ ಶೈಲಿಯ ಆಭರಣಗಳನ್ನು ಪರಿಚಯಿಸಿದ್ದೇವೆ. ಕುಂದನ್, ಮೀನಕಾರಿ, ಬೆಂಗಾಲಿ ವಿನ್ಯಾಸದ ಆಭರಣ ಈ ಬಾರಿಯ ವಿಶೇಷ.ರೂ10ಸಾವಿರದಿಂದರೂ15 ಲಕ್ಷದವರೆಗಿನ ಆಭರಣಗಳು ಲಭ್ಯ. ನಾವು ಶೇ 100 ಬೈ ಬ್ಯಾಗ್ ಪಾಲಿಸಿಯನ್ನು ಪರಿಚಯಿಸಿದ್ದೇವೆ. ಈ ಪಾಲಿಸಿ ಪ್ರಕಾರ ಒಮ್ಮೆ ಕೊಂಡುಹೋದ ವಜ್ರದ ಆಭರಣಗಳನ್ನು ಕೆಲವು ವರ್ಷಗಳ ನಂತರ ವಾಪಸ್ ತಂದುಕೊಟ್ಟರೆ ಅದೇ ದರದಲ್ಲಿ ಆಭರಣಗಳನ್ನು ವಾಪಸ್ ಪಡೆಯುತ್ತೇವೆ. ಗ್ರಾಹಕರಿಗೆ ಯಾವುದೇ ವಿಷಯದಲ್ಲಿ ನಾವು ಮೋಸ ಮಾಡುವುದಿಲ್ಲ' ಎಂದು ವಿವರಿಸಿದರು ಮಾಲೀಕ ತೇಜಮನ್.
`ನಮ್ಮದು ಕೂಡು ಕುಟುಂಬ. ಏಳೆಂಟು ಜನ ಅಣ್ಣತಮ್ಮಂದಿರು. ಇಂದಿಗೂ ಒಂದೇ ಅಡುಗೆ ಮನೆ. ಒಟ್ಟಾಗಿ ಬಾಳುವುದರಲ್ಲಿ ಇರುವ ಖುಷಿಯೇ ಬೇರೆ. ಯುಗಾದಿ ಹೊಸಚೈತನ್ಯ ನೀಡಿ ಎಲ್ಲರನ್ನು ಸೇರಿಸುವ ಹಬ್ಬ. ಹೀಗಾಗಿ ಇಂದು ಪ್ಯಾಮಿಲಿ ಗೆಟ್ಟುಗೆದರ್ ಮಾಡಿದ್ದೇವೆ. ಎಲ್ಲರೂ ತುಂಬಾ ಖುಷಿಯಾಗಿದ್ದಾರೆ' ಎಂದು ಕುಟುಂಬದ ಸಂತಸವನ್ನು ಹಂಚಿಕೊಂಡರು ತೇಜಮನ್.
್ಢ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.