ಬಾಗೇಪಲ್ಲಿ: ಮಹಿಳೆಯರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ, ಆತ್ಯಾಚಾರಗಳಿಂದ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್) ರಾಜ್ಯ ಉಪಾಧ್ಯಕ್ಷೆ ಕೆ.ನಿರ್ಮಲಾ ವಿಷಾದಿಸಿದರು.
ಪಟ್ಟಣದ ಕನ್ನಿಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಜನವಾದಿ ಮಹಿಳಾ ಸಂಘಟನೆ ಹಮ್ಮಿಕೊಂಡಿದ್ದ 2ನೇ ತಾಲ್ಲೂಕು ಸಮ್ಮೇಳನದಲ್ಲಿ ಮಾತನಾಡಿ, ‘ಮಹಿಳೆಯರು ಒಬ್ಬಂಟಿಯಾಗಿ ಬದುಕಲು ಸಾಧ್ಯವಿಲ್ಲ. ಮಹಾನಗರಗಳಲ್ಲಿ ಮಹಿಳೆ, ಮಕ್ಕಳ ಮೇಲೆ ನಡೆಯುವ ದೌರ್ಜನ್ಯ, ಅತ್ಯಾಚಾರಗಳು ಬೆಳಕಿಗೆ ಬರುತ್ತಿವೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಹೊರಬರುತ್ತಿಲ್ಲ ಎಂದು ತಿಳಿಸಿದರು.
ಅತ್ಯಾಚಾರ, ದೌರ್ಜನ್ಯಕ್ಕೆ ಒಳಗಾದವರನ್ನು ಸಮಾಜ ಅವಮಾನಕರವಾಗಿ ನೋಡುತ್ತಿದೆ. ಮಹಿಳೆಯರಿಗೆ ಸುರಕ್ಷತೆ ಇಲ್ಲವಾಗಿದೆ. ಎಲ್ಲರಿಗೂ ಸಮಾನ ರೀತಿಯಲ್ಲಿ ಪಡಿತರ ಸಿಗುವಂತಾಗಬೇಕು. ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ವರ್ಮಾ ಸಮಿತಿ ಶಿಫಾರಸು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಹಾಗೂ ಜೆಎಂಎಸ್ ಅಧ್ಯಕ್ಷೆ ಬಿ.ಸಾವಿತ್ರಮ್ಮ ಮಾತನಾಡಿ, ತಾಲ್ಲೂಕಿನ ಅಂತರ್ಜಾಲದಲ್ಲಿ ಪ್ಲೋರೋಸಿಸ್ ಇದ್ದು, ಜನತೆ ನರದೌರ್ಬಲ್ಯದಿಂದ ಬಳಲುತ್ತಿದ್ದಾರೆ. ಶೇ 55ರಷ್ಟು ಮಹಿಳೆಯರು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಎಂದು ತಿಳಿಸಿದರು. ಜಿ.ಪಂ. ಸದಸ್ಯೆ ನಾರಾಯಣಮ್ಮ, ತಾ.ಪಂ. ಅಧ್ಯಕ್ಷೆ ಮುನಿರತ್ನಮ್ಮ, ಸದಸ್ಯೆ ಶೋಭಾರಾಣಿ, ಹಾಲು ಒಕ್ಕೂಟದ ಸದಸ್ಯೆ ಶೋಭಾ, ಪುರಸಭೆ ಸದಸ್ಯೆ ಬಿ.ಬಿ.ಜ್ಯೋತಿ, ಸಂಘಟನೆ ಪದಾಧಿಕಾರಿಗಳಾದ ಜೈನಾಭೀ, ಪವಿತ್ರಾ ಮತ್ತಿತರರು ಉಪಸ್ಥಿತರಿದ್ದರು.
ಪದಾಧಿಕಾರಿಗಳ ಆಯ್ಕೆ
ಬಾಗೇಪಲ್ಲಿ ತಾಲ್ಲೂಕು ಜನವಾದಿ ಮಹಿಳಾ ಸಂಘಟನೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷೆ– ಬಿ.ಸಾವಿತ್ರಮ್ಮ, ಉಪಾಧ್ಯಕ್ಷೆ– ನಾರಾಯಣಮ್ಮ, ಕಾರ್ಯದರ್ಶಿ– ಶೋಭಾ, ಖಜಾಂಚಿ–ಶೋಭಾರಾಣಿ, ಸಹಕಾರ್ಯದರ್ಶಿ– ಮುನಿರತ್ನಮ್ಮ, ಪದಾಧಿಕಾರಿಗಳಾಗಿ ಪಾತಪಾಳ್ಯಜೈನಾಭೀ, ನಾರಾಯಣಮ್ಮ, ಸಾಕಮ್ಮ, ವರಲಕ್ಷ್ಮೀ, ಗಂಗರತ್ನಮ್ಮ, ಅಂಬಿಕಾ, ದುರ್ಗಮ್ಮ, ಮಿಟ್ಟೇಮರಿದಿಲ್ಶಾದ್, ನಾಗವೇಣಿ, ಭಾಗ್ಯಮ್ಮ, ತಿರುಮಲಕ್ಕ ಆಯ್ಕೆಯಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.