ಬೆಂಗಳೂರು: ರಾಜ್ಯದಲ್ಲಿ ಪ್ರತಿ ವರ್ಷ 3ಲಕ್ಷ ಹೊಸ ಮನೆಗಳನ್ನು ನಿರ್ಮಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಬಸವ ವಸತಿ ಯೋಜನೆಯ ಅಡಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 20 ಮನೆಗಳು ಹಾಗೂ ನಗರ ಪ್ರದೇಶಗಳಲ್ಲಿ 20 ಸಾವಿರ ಮನೆಗಳ ನಿರ್ಮಾಣ ಗುರಿಯನ್ನು ಸರ್ಕಾರ ಹೊಂದಿದೆ. ವಸತಿ ಕ್ಷೇತ್ರಕ್ಕೆ ಈ ಬಾರಿ ರೂ 1,365 ಕೋಟಿ ನಿಗದಿ ಮಾಡಲಾಗಿದೆ.
ಪ್ರಸಕ್ತ ಆರ್ಥಿಕ ಸಾಲಿನಿಂದ ಪ್ರತಿ ಮನೆಗಳ ನಿರ್ಮಾಣಕ್ಕೆ ನೀಡುತ್ತಿದ್ದ ಸಹಾಯಧನವನ್ನು ರೂ 75 ಸಾವಿರದಿಂದ ರೂ1.20 ಲಕ್ಷಕ್ಕೆ ಹೆಚ್ಚಿಸಲಾಗುವುದು. ಬಸವ ವಸತಿ, ಅಂಬೇಡ್ಕರ್ ವಸತಿ, ವಾಜಪೇಯಿ ನಗರ ವಸತಿ ಮತ್ತು ಇಂದಿರಾ ಆವಾಸ್ ಯೋಜನೆಗಳಿಗೆ ಈ ಹೆಚ್ಚಳ ಅನ್ವಯ ಆಗುತ್ತದೆ.
ಕಡಿಮೆ ಆದಾಯದ ಜನರಿಗೆ ಅನುಕೂಲ ಕಲ್ಪಿಸಲು ಜಿ-2 ಮಾದರಿಯ ಫ್ಲ್ಯಾಟ್ಗಳನ್ನು ನಿರ್ಮಿಸಿ, ಕೈಗಟಕುವ ದರದಲ್ಲಿ ಹಂಚಿಕೆ ಮಾಡಲಾಗುವುದು. ಇಂದಿರಾ ಆವಾಸ್ ಯೋಜನೆಯ ಅಡಿ, ಜಿಪಿಎಸ್ ತಂತ್ರಜ್ಞಾನದ ಸಹಾಯ ಪಡೆದು ಮನೆಗಳ ನಿರ್ಮಾಣದ ಪ್ರಗತಿ ಆಧರಿಸಿ ಫಲಾನುಭವಿಗಳ ಖಾತೆಗೆ ಹಣವನ್ನು ನೇರವಾಗಿ ಬಿಡುಗಡೆ ಮಾಡಲಾಗುವುದು.
ಬೆಂಗಳೂರಿನ ಸೂರ್ಯನಗರದ ವಿವಿಧ ಹಂತದ ಪ್ರದೇಶಗಳಿಗೆ ರೂ 450 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಪೂರೈಕೆ.ಬೆಂಗಳೂರಿನ ಯಲಹಂಕ, ಕೆಂಗೇರಿ ಮತ್ತು ಗುಲ್ಬರ್ಗದಲ್ಲಿ ಕರ್ನಾಟಕ ಗೃಹ ಮಂಡಳಿ ನಿರ್ಮಿಸಿರುವ ಬಡಾವಣೆಗಳಲ್ಲಿ ಖಾಸಗಿ ಸಹಯೋಗದಲ್ಲಿ ಬಹುಮಹಡಿ ಮನೆಗಳ ನಿರ್ಮಾಣ. ರಾಜೀವ್ ಗಾಂಧಿ ಆವಾಸ್ ಯೋಜನೆ ಅಡಿ ಪ್ರಸಕ್ತ ಸಾಲಿನಲ್ಲಿ 5,549 ಮನೆಗಳ ನಿರ್ಮಾಣ ಗುರಿ ಇದೆ.