ದಾವಣಗೆರೆ: ಸ್ಥಳೀಯ ಇ.ಎಸ್.ಐ. ಆಸ್ಪತ್ರೆಯ ಆಧುನೀಕರಣ ಕಾಮಗಾರಿಯನ್ನು ಒಂದು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.ಆಸ್ಪತ್ರೆಯ ಆಧುನೀಕರಣ ಕಾಮಗಾರಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಆಸ್ಪತ್ರೆಯನ್ನು ್ಙ 25 ಕೋಟಿ ವೆಚ್ಚದಲ್ಲಿ ಆಧುನೀಕರಿಸಲಾಗುತ್ತಿದೆ. ಹೊರರೋಗಿಗಳ ವಿಭಾಗ, ಕಾರ್ಮಿಕರ ವಸತಿಗೃಹ, ಸಮುದಾಯ ಭವನ ಮುಂತಾದ ಸೌಲಭ್ಯ ಕಲ್ಪಿಸಲು ಹೆಚ್ಚುವರಿಯಾಗಿ ್ಙ 10 ಕೋಟಿ ನೀಡಲು ತಾವು ಸಿದ್ಧವಿದ್ದು, ಅದಕ್ಕಾಗಿ ರಾಜ್ಯ ಸರ್ಕಾರ 2 ಎಕರೆ ಜಾಗ ಒದಗಿಸಬೇಕು ಎಂದು ಅವರು ತಿಳಿಸಿದರು.
ಇ.ಎಸ್.ಐ ಯೋಜನೆಯಲ್ಲಿ ಕೇಂದ್ರ ಸರ್ಕಾರ ಶೇ. 87.5ರಷ್ಟು ಹಣ ನೀಡುತ್ತದೆ, ರಾಜ್ಯವು ಶೇ. 12.5ರಷ್ಟು ಹಣ ನೀಡಬೇಕು. ಕೇಂದ್ರದಿಂದ ಅನಾಯಾಸವಾಗಿ ಹಣ ನೀಡಲು ಸಿದ್ಧವಿದ್ದು ರಾಜ್ಯ ಸರ್ಕಾರ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಆಸ್ಪತ್ರೆಗಳಿಗೆ ಸ್ವತಂತ್ರವಾಗಿ ವೈದ್ಯರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇ.ಎಸ್.ಐ. ಕಾಯ್ದೆಗೆ ತಿದ್ದುಪಡಿ ಮಾಡಲಾಗಿದ್ದು ನಿವೃತ್ತ ಕಾರ್ಮಿಕರ ಕುಟುಂಬ ವರ್ಗದವರಿಗೂ ಸೌಲಭ್ಯ ವಿಸ್ತರಿಸಲು ಅವಕಾಶವಿದೆ ಎಂದು ಹೇಳಿದರು. ಆಟೋರಿಕ್ಷಾ ಚಾಲಕರು, ಮಂಡಕ್ಕಿಬಟ್ಟಿ ಕಾರ್ಮಿಕರು ಮುಂತಾದ ಅಸಂಘಟಿತ ಕಾರ್ಮಿಕರಿಗೆ ಇ.ಎಸ್.ಐ. ಸೌಲಭ್ಯ ನೀಡಲು ಆಗದಿದ್ದರೂ ಅವರನ್ನು ರಾಷ್ಟ್ರೀಯ ಸ್ವಾಸ್ಥ್ಯವಿಮಾ ಯೋಜನೆ ವ್ಯಾಪ್ತಿಗೆ ತರಬಹುದಾಗಿದೆ ಎಂದು ತಿಳಿಸಿದರು.
ದೇಶದಲ್ಲಿ 7.5 ಕೋಟಿ ಜನರನ್ನು ಇ.ಎಸ್.ಐ. ವ್ಯಾಪ್ತಿಗೆ, 15 ಕೋಟಿ ಜನರನ್ನು ಆರ್ಎಸ್ಬಿವೈ ವ್ಯಾಪ್ತಿಗೆ ತರಲಾಗಿದೆ ಎಂದು ಮಾಹಿತಿ ನೀಡಿದರು.ರಾಜ್ಯ ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಮಾತನಾಡಿ, ರಾಜ್ಯದಲ್ಲಿ 10 ಸಾವಿರ ಕೈಗಾರಿಕೆಗಳಲ್ಲಿ 15 ಲಕ್ಷ ಕಾರ್ಮಿಕರಿದ್ದಾರೆ. 2.93 ಕೋಟಿ ಅಸಂಘಟಿತ ಕಾರ್ಮಿಕರಿದ್ದಾರೆ. ರಾಜ್ಯದ 8 ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಆರ್ಎಸ್ಬಿ ಯೋಜನೆಯನ್ನು ರಾಜ್ಯದ 5 ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ಮಂಡಕ್ಕಿ ಬಟ್ಟಿ ಕಾರ್ಮಿಕರಿಗೆ ಇಎಸ್ಐ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು. ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ನಗರದಲ್ಲಿ ಲಭ್ಯವಿರುವ ನಿವೇಶನದಲ್ಲಿ ಹೊರರೋಗಿಗಳ ವಿಭಾಗ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಸಚಿವರಾದ ಅಲ್ಲಂ ವೀರಭದ್ರಪ್ಪ, ಕೆ.ಬಿ. ಕೋಳಿವಾಡ, ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ, ಮೇಯರ್ ಎಂ.ಜಿ. ಬಕ್ಕೇಶ್, ನಿಗಮದ ಸದಸ್ಯರಾದ ವೆಂಕಟೇಶ್, ಭೀಮರಾವ್, ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಕಾರ್ಮಿಕ ಮುಖಂಡ ಎಚ್.ಕೆ. ರಾಮಚಂದ್ರಪ್ಪ ಹಾಜರಿದ್ದರು. ಕಾರ್ಮಿಕರ ರಾಜ್ಯ ವಿಮಾ ನಿಗಮದ ಮಹಾ ನಿರ್ದೇಶಕ ಡಾ.ಸಿ.ಎಸ್. ಕೇದಾರ್ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.