ಮುಳಬಾಗಲು: ತೀವ್ರ ಗದ್ದಲ, ವಿರೋಧ, ಪ್ರತಿರೋಧಗಳ ನಡುವೆಯೇ ಇಲ್ಲಿನ ಚುನಾವಣಾಧಿಕಾರಿ ಕಚೇರಿಯಲ್ಲಿ ಗುರುವಾರ ನಾಮಪತ್ರಗಳ ಪರಿಶೀಲನೆ ನಡೆದು, ಕಾಂಗ್ರೆಸ್ ಹೆಸರಿನಲ್ಲಿ ಮತ್ತು ಪಕ್ಷೇತರರಾಗಿ ಸ್ಪರ್ಧಿಸಿರುವ ಜಿ.ಮಂಜುನಾಥ ಅವರ ನಾಮಪತ್ರ ಅಂಗೀಕಾರಗೊಂಡಿತು.
ಮಂಜುನಾಥ್ ಅವರು ತಾವು ಬುಡಗ ಜಂಗಮ ಜಾತಿಗೆ ಸೇರಿದವರು ಎಂದು ಸಲ್ಲಿಸಿದ್ದ ಪ್ರಮಾಣಪತ್ರವನ್ನು ಪರಿಗಣಿಸಬಾರದು ಎಂದು ಹಲವರು ವ್ಯಕ್ತಪಡಿಸಿದ ವಿರೋಧ ಆಗ್ರಹಗಳ ನಡುವೆ, ಚರ್ಚೆ, ಪರಿಶೀಲನೆ ನಡೆದು ಸಂಜೆ 5ರ ವೇಳೆಗೆ ನಾಮಪತ್ರ ಪುರಸ್ಕೃತಗೊಂಡಿರುವುದಾಗಿ ಚುನಾವಣಾಧಿಕಾರಿ ಘೋಷಿಸಿದರು.
ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾದ ನಾಮಪತ್ರಗಳ ಪರಿಶೀಲನೆ ಮತ್ತು ಅಂಗೀಕಾರ ಮಧ್ಯಾಹ್ನ ಎರಡು ಗಂಟೆಯವರೆಗೂ ನಡೆಯಿತು. 40 ನಾಮಪತ್ರಗಳ ಪೈಕಿ ಶಾಸಕ ಅಮರೇಶ್. ಜೆಡಿಎಸ್ ಅಭ್ಯರ್ಥಿ ಮುನಿಆಂಜಪ್ಪ ಸೇರಿದಂತೆ 9 ನಾಮಪತ್ರಗಳನ್ನು ಹೊರತುಪಡಿಸಿ ಎಲ್ಲಾ ನಾಮಪತ್ರಗಳು ಅಂಗೀಕಾರವಾದವು. ಅಭ್ಯರ್ಥಿ ಜಿ. ಮಂಜುನಾಥ್ ನಾಮಪತ್ರಗಳ ಪರ ಮತ್ತು ವಿರುದ್ಧ ವಾದ ಮಂಡಿಸಲು ಬೆಂಗಳೂರಿನಿಂದ ವಕೀಲರು ಸೇರಿದಂತೆ ನಿವೃತ್ತ ನ್ಯಾಯಮೂರ್ತಿಯೊಬ್ಬರು ಬಂದಿದ್ದರು. ಮಂಜುನಾಥ್ ನಾಮಪತ್ರ ಅಂಗೀಕರಿಸುವ ವಿಷಯದಲ್ಲಿ ಪರ ಮತ್ತು ವಿರೋಧವಾದ ವಾದ ಮಂಡನೆ ವೇಳೆ ಒಂದು ಹಂತದಲ್ಲಿ ಕಚೇರಿಯ ಒಳಗೆ ಏರು ಧ್ವನಿಯ ಮಾತುಕತೆಗಳು ನಡೆದವು. ಪೊಲೀಸರು ಮತ್ತು ಅರೆಸೇನಾ ಪಡೆ ಸಿಬ್ಬಂದಿ ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು. ನಾಮಪತ್ರ ಪರಿಶೀಲನೆಯನ್ನು ಸಂಜೆ 4ಕ್ಕೆ ಮುಂದೂಡಲಾಯಿತು.
ಅಪಾರ ಬೆಂಬಲಿಗರು: ಸುಮಾರು ನಾಲ್ಕು ಗಂಟೆಯ ವೇಳೆಗೆ ಸಾವಿರಾರು ಮಂದಿ ಕೊತ್ತೂರು ಮಂಜುನಾಥ್ ಅಭಿಮಾನಿಗಳು ಮಿನಿವಿಧಾನಸೌಧ ಬಳಿ ಜಮಾಯಿಸಿದ್ದರು. ನಾಮಪತ್ರ ಅಂಗೀಕಾರಗೊಂಡ ವಿಷಯ ತಿಳಿಯುತ್ತಿದ್ದಂತೆಯೇ ಪಟಾಕಿ ಸಿಡಿಸಿ, ಮಂಜುನಾಥ್ ಅವರನ್ನು ಭುಜದ ಮೇಲೆ ಹೊತ್ತು ಮೆರವಣಿಗೆ ನಡೆಸಿದರು.