ಹಿರಿಯೂರು: ಹೈಕೋರ್ಟ್ನಲ್ಲಿ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಿಭಾಗೀಯ ಪೀಠದ ಆದೇಶದ ಮೇರೆಗೆ ಸೋಮವಾರ ಇಲ್ಲಿನ ವಾಣಿವಿಲಾಸ ಸಕ್ಕರೆ ಕಾರ್ಖಾನೆ ಕಾರ್ಮಿಕರ 416 ಕುಟುಂಬಗಳಿಗೆ ಸಂಸಾರ ನಿರ್ವಹಣೆಗೆ ತಲಾ ₨ ೧೦ ಸಾವಿರ ವಿತರಿಸಲಾಗಿದೆ ಎಂದು ಕಾರ್ಮಿಕ ಮುಖಂಡ ಎಂ.ಆರ್.ಪುಟ್ಟಸ್ವಾಮಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸರ್ಕಾರ ವಿಶೇಷ ಅನುದಾನವಾಗಿ ₨ ೫೦ ಲಕ್ಷ ನೀಡಿದ್ದು, ಸದ್ಯಕ್ಕೆ ಕಾರ್ಮಿಕರ ಒಂದು ತಿಂಗಳ ಸಂಸಾರ ನಿರ್ವಹಣೆಗೆಂದು ತಲಾ ಹತ್ತು ಸಾವಿರ ನೀಡಿದೆ. ಕಾರ್ಮಿಕರ ಬಾಕಿ ಪಾವತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿರುವ ಪ್ರಕರಣದಲ್ಲಿ ಜನವರಿ ಅಥವಾ ಫೆಬ್ರುವರಿಯಲ್ಲಿ ಅಂತಿಮ ತೀರ್ಪು ಹೊರ ಬೀಳುವ ಸಾಧ್ಯತೆ ಇದ್ದು, ಕಾರ್ಖಾನೆ ಮಾರಾಟ ಮಾಡುವ ಅಗತ್ಯ ಬೀಳುವುದಿಲ್ಲ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಕಾರ್ಖಾನೆ ಜಾಗವನ್ನು ವಶಪಡಿಸಿಕೊಂಡಿರುವ ಬಾಬ್ತು ಹೆದ್ದಾರಿ ಪ್ರಾಧಿಕಾರ ನೀಡಬೇಕಿರುವ ೨೧ ಕೋಟಿ ಬಾಕಿ ಬಗ್ಗೆ ಒಂದು ತಿಂಗಳಲ್ಲಿ ತೀರ್ಪು ಬರುವ ನಿರೀಕ್ಷೆ ಇದೆ. ತೀರ್ಪು ಬಂದರೆ ಕಾರ್ಮಿಕರಿಗೆ ಬರಬೇಕಿರುವ ಪೂರ್ಣ ಬಾಕಿ ಪಾವತಿ ಆಗಲಿದೆ. ಜಿಲ್ಲಾಧಿಕಾರಿಗಳೇ ಸಮಾಪನ ಅಧಿಕಾರಿಯಾಗಿದ್ದು ಪ್ರಕರಣ ಇತ್ಯರ್ಥವಾದ ನಂತರ ಕಾರ್ಮಿಕರ ಬಾಕಿ ವಿತರಿಸುತ್ತಾರೆ. ಪ್ರಯುಕ್ತ ಕಾರ್ಮಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಪುಟ್ಟಸ್ವಾಮಿ ಒತ್ತಾಯಿಸಿದ್ದಾರೆ.