ಕಣ್ಣು ಹಾಯಿಸಿದಲ್ಲೆಲ್ಲ ಮರುಭೂಮಿ, ಅಲ್ಲೊಂದು ಇಲ್ಲೊಂದು ಹಸಿರು, ಅದರ ನಡುವೆಯೂ ಜೀವಸೆಲೆ. ಅದರ ಸಂಕೇತ ಎಂಬಂತೆ ಉಡುಪಿನಲ್ಲಿ ಅಸಂಖ್ಯಾತ ಗಾಢ ವರ್ಣ ವೈವಿಧ್ಯ, ಹಾಡು, ನೃತ್ಯ, ಸಂಗೀತದಿಂದ ಸಮೃದ್ಧವಾದ ಜನಪದ ಪರಂಪರೆ. ಅದುವೇ ರಾಜಸ್ತಾನ.
ಆ ರಾಜ್ಯದ ಜನ ವ್ಯಾಪಾರ ವಹಿವಾಟಿಗೆ ಹೆಸರಾದವರು. ದೇಶದ ಮೂಲೆಮೂಲೆಗಳಲ್ಲೂ ಇದ್ದಾರೆ. ತಮ್ಮಂದಿಗೆ ತಮ್ಮ ನಾಡಿನ ಆಹಾರದ ವಿಶಿಷ್ಟ ಸವಿಯನ್ನು ಎಲ್ಲೆಡೆ ಪರಿಚಯಿಸಿದ್ದಾರೆ.
ಕಣ್ಣಿನಿಂದ ನೀರು ಬರಿಸುವಷ್ಟು ಖಾರ, ಕಡಲೆಹಿಟ್ಟು, ಹೊಟ್ಟೆಯನ್ನು ತಂಪು ಮಾಡುವ ಮೊಸರಿನ ಯಥೇಚ್ಛ ಬಳಕೆ ರಾಜಸ್ತಾನಿ ಆಹಾರದ ಸ್ಪೆಷಾಲಿಟಿ. ಅದನ್ನು ಈಗ ಬೆಂಗಳೂರಿಗರಿಗರಿಗೂ ಉಣಬಡಿಸುತ್ತಿದೆ ಸ್ಯಾಂಕಿ ರಸ್ತೆಯ ಐಟಿಸಿ ಸಮೂಹದ ಪಂಚತಾರಾ ಹೋಟೆಲ್ ವಿಂಡ್ಸರ್.
ಇಲ್ಲಿ ನ. 20ರ ವರೆಗೆ ನಡೆಯುತ್ತಿರುವ ರಾಜಸ್ತಾನಿ ತಾಟ್ ಆಹಾರೋತ್ಸವದಲ್ಲಿ ರಾಜಸ್ತಾನದ ರುಚಿಕರ ಅಡುಗೆ ಆಸ್ವಾದಿಸಬಹುದು.
ಆಹ್ಲಾದಕರ ಅನುಭವ ಕೊಡುವ ಥಂಡೈ, ರಾಯ್ ಕಿ ಮಚ್ಛಿ, ಪನೀರ್ ಕೆ ಸೂಲೆ, ಭಾರ್ವಾನ್ ಘಟ್ಟೆ, ದಾಲ್ಬಟಿ ಚುರ್ಮಾ, ರಾಜಸ್ತಾನಿ ಖಡಿ, ತ್ರಿಪೋಲಿಯಾ ಸಬ್ಜಿ, ಘಟ್ಟಿ ಕಿ ಸಾಗ್, ದಾಲ್ ಪಚ್ಮೇಲ್, ಮೇಥಿ ಮಾಸ್ ಮತ್ತು ಮುರ್ಗ್ ಜೋದ್ಪುರಿ, ಜೀಂಗಾ ಜೈಸಲ್ಮೇರಿಗಳನ್ನು ಮನದಣಿಯೆ ಸವಿಯಬಹುದು.
ಮೆಕ್ಕೆಜೋಳ, ಬಾಜ್ರಾ, ಗೋಧಿ, ಮೇಥಿ ಔರ್ ಬೇಜಡ್ನ ಬಗೆಬಗೆ ರೋಟಿಗಳು, ಮಂಗೋಡಿ ಪಲಾವ್, ಕಾಬೂಲಿ ಪಲಾವ್, ಗಟ್ಟಾ ಪಲಾವ್, ಬಿಕಾನೇರಿ ರಸಗುಲ್ಲಾ, ಮೂಂಗ್ ದಾಲ್ ಹಲ್ವಾ, ಮಿಸ್ರಿ ಹಲ್ವಾ, ರಾಜ್ಭೋಗ್ ಮುಂತಾದ ಪಕ್ಕಾ ರಾಜಸ್ತಾನಿ ಸಿಹಿ ಭಕ್ಷ್ಯಗಳೊಡನೆ ಭೋಜನ ಮುಗಿಸಬಹುದು. ಈ ಬಫೆ ಭೋಜನ ರಾತ್ರಿಯೂಟಕ್ಕೆ ಮಾತ್ರ. ಮಾಹಿತಿಗೆ: 2226 9898.