ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕಿಲೀಕ್ಸ್ ವೆಬ್‌ಸೈಟ್‌ನಿಂದ ರಹಸ್ಯ ದಾಖಲೆ ಬಹಿರಂಗ....

Last Updated 4 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪಶ್ಚಿಮ ಬಂಗಾಳದಲ್ಲಿ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಕುರಿತು ಆಗ ಮುಖ್ಯಮಂತ್ರಿಯಾಗಿದ್ದ ಬುದ್ಧದೇವ್ ಭಟ್ಟಾಚಾರ್ಯ ಅವರ ಮನವೊಲಿಸುವಂತೆ ಅಮೆರಿಕದ ವಾಲ್‌ಮಾರ್ಟ್ ಮುಖ್ಯಸ್ಥರಿಗೆ ಪ್ರಧಾನಿ ಹೇಳಿದ್ದರು ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಭಾನುವಾರ ತಿಳಿಸಿದ್ದಾರೆ.

ವಿಕಿಲೀಕ್ಸ್ ವೆಬ್‌ಸೈಟ್ ಇತ್ತೀಚೆಗೆ ಬಹಿರಂಗ ಪಡಿಸಿರುವ ಅಮೆರಿಕದ ರಹಸ್ಯ ದಾಖಲೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಪ್ರಕಾಶ್, `ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ತಮ್ಮ ಪಕ್ಷ ವಿರೋಧಿಸುತ್ತದೆ ಎಂದು ತಮ್ಮನ್ನು ಭೇಟಿ ಮಾಡಿದ್ದ ವಾಲ್‌ಮಾರ್ಟ್ ಮುಖ್ಯಸ್ಥರಿಗೆ ಬುದ್ಧದೇವ್ ಸ್ಪಷ್ಟ ಪಡಿಸಿದ್ದರು~ ಎಂದಿದ್ದಾರೆ.

`ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಎಡ ಪಕ್ಷಗಳ ಆಡಳಿತವಿದ್ದಾಗ ವಿದೇಶಿ ನೇರ ಬಂಡವಾಳ ಹೂಡಿಕೆ ಕುರಿತಂತೆ ಅಮೆರಿಕದ ನಿಯೋಗವು ಈ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿತ್ತು. ಈ ರಾಜ್ಯಗಳ ಮುಖ್ಯಮಂತ್ರಿಗಳು ಎಫ್‌ಡಿಐ ಬಗ್ಗೆ ತಮ್ಮ ಪಕ್ಷ ಹೊಂದಿದ್ದ ವಿರೋಧಿ ನಿಲುವನ್ನು ಆ ನಿಯೋಗಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು ಎಂದು ಕಾರಟ್ ಹೇಳಿದರು.

`ಈ ರಹಸ್ಯ ಮಾಹಿತಿ ಬಹಿರಂಗದಲ್ಲಿ ಎರಡು ವಿಧವಿದೆ. ಒಂದು ಭಾರತೀಯ ಮುಖಂಡರನ್ನು ಭೇಟಿ ಮಾಡಿದ ಅಮೆರಿಕ ನಿಯೋಗ ಕುರಿತ ವಾಸ್ತವದ ಮಾಹಿತಿ. ಮತ್ತೊಂದು ಈ ಭೇಟಿಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿರುವ ಮಾಹಿತಿ. ಈ ವಿಶ್ಲೇಷಣೆಯನ್ನು ನಾವು ಒಪ್ಪುವುದಿಲ್ಲ~ ಎಂದರು.

`ರಹಸ್ಯ ಮಾಹಿತಿ ಬಹಿರಂಗದ ಉದ್ದೇಶ ಭಾರತವು ವಿದೇಶಿ ನೀತಿ ವಿಚಾರದಲ್ಲಿ ಅಮೆರಿಕದ ಒತ್ತಡಕ್ಕೆ ಮಣಿದಿದೆ ಎಂದು ತೋರಿಸುವುದೇ ಆಗಿದೆ. ಅಮೆರಿಕವು ಭಾರತ ಸರ್ಕಾರ ಮತ್ತು ರಾಜಕೀಯ ಪಕ್ಷಗಳ ಮೇಲೆ ಕಳೆದ ಐದಾರು ವರ್ಷಗಳಿಂದ ನಿರಂತರವಾಗಿ ವಿವಿಧ ರೀತಿಯ ಒತ್ತಡ ಹೇರುತ್ತಲೇ ಇದೆ~ ಎಂದು ಅವರು ಆಪಾದಿಸಿದರು.
 

ಡೇವಿಡ್ ಹೆಡ್ಲಿ ಹಸ್ತಾಂತರ: ಭಾರತದ ನಾಟಕ- ವಿಕಿಲೀಕ್ಸ್

ನವದೆಹಲಿ (ಪಿಟಿಐ):
ಲಷ್ಕರ್-ಎ-ತೊಯ್ಬಾದೊಂದಿಗೆ  ಸೇರಿಕೊಂಡು ವಿಧ್ವಂಸಕ ಕೃತ್ಯ ಎಸಗಿರುವ ಉಗ್ರ ಡೇವಿಡ್ ಹೆಡ್ಲಿಯನ್ನು ಹಸ್ತಾಂತರಿಸುವಂತೆ ಭಾರತವು ಎರಡು ವರ್ಷಗಳ ಹಿಂದೆ  ಅಮೆರಿಕಕ್ಕೆ ಮಾಡಿಕೊಂಡ ಮನವಿ ಬರೀ ನಾಟಕ. ನಾಗರಿಕರ ಮನ ತಣಿಸಲು ಭಾರತ ಸರ್ಕಾರವು ಈ ರೀತಿ ಮಾಡಿದೆ ಎಂಬ ಮಾಹಿತಿಯನ್ನು ವಿಕಿಲೀಕ್ಸ್ ವೆಬ್‌ಸೈಟ್ ಬಹಿರಂಗ ಪಡಿಸಿದೆ.

ಈ ವಿಚಾರದಲ್ಲಿ (ಡೇವಿಡ್ ಹೆಡ್ಲಿ ಹಸ್ತಾಂತರ) ಸರ್ಕಾರ ಅಷ್ಟೇನು ಆಸಕ್ತಿ ಹೊಂದಿಲ್ಲ. ಆದರೆ  ಹಸ್ತಾಂತರ ಮಾಡುವುದನ್ನು ಎಂದು ಆಪೇಕ್ಷಿಸಿದೆಯಷ್ಟೆ ಎಂದು ಆಗ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಎಂ.ಕೆ. ನಾರಾಯಣನ್ ಆಗಿನ ಅಮರಿಕದ ರಾಯಭಾರಿ ಟಿಮತಿ ಜೆ. ರೋಮರ್ ಅವರಿಗೆ  ಡಿಸೆಂಬರ್ 2009ರಲ್ಲಿ ಹೇಳಿದ್ದರು. ಅಮೆರಿಕದ ವಿದೇಶಾಂಗ ಇಲಾಖೆಗೆ ರೋಮರ್ ತಿಳಿಸಿದ್ದ ಈ ಮಾಹಿತಿಯನ್ನು ವಿಕಿಲೀಕ್ಸ್ ಬಯಲು ಮಾಡಿದೆ.

`ಎನ್‌ಎಸ್‌ಎನಿಂದ ನಾರಾಯಣನ್ ನಿರ್ಗಮನದಿಂದ ಒಳಿತಾಯಿತು~

ನವದೆಹಲಿ (ಪಿಟಿಐ):
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ (ಎನ್‌ಎಸ್‌ಎ) ಎಂ.ಕೆ. ನಾರಾಯಣನ್ 2010ರ ಜನವರಿಯಲ್ಲಿ ಆ ಹುದ್ದೆ ಇಂದ ನಿರ್ಗಮಿಸಿದ್ದು ಅಮೆರಿಕ ಪಾಲಿಗೆ ಧನಾತ್ಮಕ ಬೆಳವಣಿಗೆಯೇ ಆಗಿದೆ. ಕಾಶ್ಮೀರ ವಿಚಾರದಲ್ಲಿ ನಾರಾಯಣನ್ ಅವರನ್ನು  ಅಮೆರಿಕ `ದೊಡ್ಡ ತೊಡಕು~ ಎಂದೇ ಭಾವಿಸಿತ್ತು ಎಂಬ ರಹಸ್ಯ ಮಾಹಿತಿಯನ್ನು ವಿಕಿಲೀಕ್ಸ್ ವೆಬ್‌ಸೈಟ್ ಬಯಲು ಮಾಡಿದೆ.

ಭಾರತದಲ್ಲಿದ್ದ ಅಮೆರಿಕದ ಮಾಜಿ ರಾಯಭಾರಿ ಟಿಮತಿ ಜೆ. ರೋಮರ್, `ಕಾಶ್ಮೀರ ವಿಚಾರದಲ್ಲಿ ಭಾರತದ ನಿಲುವು ಪ್ರಬಲವಾಗಿದೆ. ಆದರೆ, ಪ್ರಭಾವಿ ವ್ಯಕ್ತಿಯಾದ ಎಂ.ಕೆ. ನಾರಾಯಣನ್ ಸಂಪ್ರದಾಯವಾದಿ.  ಕಾಶ್ಮೀರ ಕುರಿತಂತೆ ಭಾರತ ರೂಪಿಸುತ್ತಿದ್ದ ನೀತಿಗೆ ಅವರು ಯಾವಾಗಲು ಅಡ್ಡಗಾಲು ಹಾಕುತ್ತಿದ್ದರು.

ಈಗ ಅವರು ಎನ್‌ಎಸ್‌ಎನಿಂದ ನಿರ್ಗಮಿಸಿರುವುದು ಅಮೆರಿಕಕ್ಕೆ ಒಳಿತೇ ಆಗಿದೆ~ ಎಂಬ ಅಭಿಪ್ರಾಯವನ್ನು ಅಮೆರಿಕದ ವಿದೇಶಾಂಗ ಇಲಾಖೆಗೆ 2010ರ ಫೆಬ್ರುವರಿಯಲ್ಲಿ ರವಾನಿಸಿದ್ದರು. ಇದನ್ನು ವಿಕಿಲೀಕ್ಸ್ ಬಹಿರಂಗ ಪಡಿಸಿದೆ. ವಿಕಿಲೀಕ್ಸ್ ಇತ್ತೀಚೆಗೆ 2.5 ಲಕ್ಷ ರಹಸ್ಯ ದಾಖಲೆಗಳನ್ನು ಬಯಲು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT