ಉಡುಪಿ: ವಿಜಯನಗರದ ಮಹಾರಾಜ ಒಂದನೇ ದೇವರಾಯನ ಕಾಲದ ಅಪರೂಪದ ಶಾಸನವೊಂದು ಕುಂದಾಪುರ ತಾಲ್ಲೂಕಿನ ರಟ್ಟಾಡಿಯಲ್ಲಿ ಪತ್ತೆಯಾಗಿದೆ ಎಂದು ಶಿರ್ವ ಎಂಎಸ್ಆರ್ಎಸ್ ಕಾಲೇಜಿನ ಪುರಾತತ್ವ ಉಪನ್ಯಾಸಕ ಪ್ರೊ. ಟಿ.ಮುರುಗೇಶಿ ಬುಧವಾರ ತಿಳಿಸಿದ್ದಾರೆ.
ಕುಂದಾಪುರ ಭಂಡಾರ್ಕರ್ಸ್ ಕಾಲೇಜಿನಲ್ಲಿ ಸಂರಕ್ಷಿಸಲಾಗಿರುವ ಶಾಸನದ ಬಗ್ಗೆ, ಕಾಲೇಜಿನ ಇತಿಹಾಸ ವಿಭಾಗದ ಪ್ರೊ. ಉದಯ ಕುಮಾರ್ ಮತ್ತು ಪ್ರೊ. ಗೋಪಾಲ್ ಮಾಹಿತಿ ನೀಡಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದರು. ಹಾಗಾಗಿ ವಿಜಯನಗರ ಮತ್ತು ತುಳುನಾಡಿನ ಇತಿಹಾಸ ಅಧ್ಯಯನ ದೃಷ್ಟಿಯಿಂದ ಅತ್ಯಂತ ಪ್ರಮುಖ ಶಾಸನವೊಂದನ್ನು ಶೋಧಿಸಿದಂತಾಗಿದೆ ಎಂದಿದ್ದಾರೆ.
4 ಅಡಿ ಎತ್ತರದ ಆಯತಾಕಾರದ ನೀಸ್ ಶಿಲೆಯ ಫಲಕದ ಮೇಲ್ಭಾಗವನ್ನು ಕುದುರೆ ಲಾಳಾಕೃತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಅನುಕ್ರಮವಾಗಿ ಎಡದಿಂದ ಬಲಕ್ಕೆ ನಿಂತಿರುವ ನಂದಿ, ಪ್ರಭಾವಳಿ ಸಹಿತವಾದ ಶಿವಲಿಂಗ, ದೀಪಸ್ಥಂಭ, ಪದ್ಮಾಸನದಲ್ಲಿ ಅಂಜಲೀಬದ್ಧನಾಗಿ ಕುಳಿತ ಭಕ್ತನೊಬ್ಬನ ಶಿಲ್ಪವಿದೆ. ಮೇಲೆ ಸೂರ್ಯ ಮತ್ತು ಚಂದ್ರರ ಉಬ್ಬು ಶಿಲ್ಪಗಳಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಶಾಸನ‘ ಶ್ರೀ ಗಣಾಧಿ ಪತವೇ ನಮ: ಶ್ರೀ ದೇವ ದೇವ ಭೃಂಗನಾಥ, ಶ್ರೀ ನಮಸ್ತುಂಗ ಸಿರಶ್ಚುಂಬಿ ಚಂದ್ರ ಚಾಮರ ತಾರವೇ ತ್ರೈಲೋಕ್ಯ ನಗರಾರಂಭ ಮೂಲ ಸ್ತಂಭಾಯ ಸಂಭವೇ’ ಎಂಬ ಶಿವಸ್ತುತಿಯೊಂದಿಗೆ ಆರಂಭವಾಗಿದೆ. ಜಯಾಭ್ಯುದಯ ಶಕ ವರ್ಷ 1345, ಸರ್ವಧಾರಿ ಸಂವತ್ಸರ ಬಹುಳ 12, ಭಾನುವಾರ ಎಂದು ಕಾಲ ಉಲ್ಲೇಖಿಸಲಾಗಿದ್ದು, ಅದು ಕ್ರಿ.ಶ. 1408ಕ್ಕೆ ಸರಿ ಹೊಂದುತ್ತದೆ ಎಂದು ಅವರು ತಿಳಿಸಿದ್ದಾರೆ.
ಶಾಸನ 1ನೇ ದೇವರಾಯನನ್ನು ರಾಜಾಧಿರಾಜ ರಾಜ ಪರಮೇಶ್ವರ ಭಾಷೆಗೆ ತಪ್ಪುವ ರಾಯರ ಗಂಡ ಪ್ರೌಢ ದೇವರಾಯ ಒಡೆಯರು ಎಂದು ಉಲ್ಲೇಖಿಸಿ, ಆತನ ಆಳ್ವಿಕೆ ಕಾಲದಲ್ಲಿ ಬಾಚಂಣ ಒಡೆಯರು ಕಬ್ಬನಾಳ ದುರ್ಗದ ನಾಯಕನನ್ನು ದಮನಿಸಿದಂತೆ ತಿಳಿಸುತ್ತದೆ.
ಬಹುಶಃ ಬಾಚಣ್ಣ ಒಡೆಯನ ಬಾರಕೂರಿನ ಮೇಲಿನ ಆಳ್ವಿಕೆ ತಿಳಿಸುವ ಮೊಟ್ಟ ಮೊದಲ ಶಾಸನವಿದು. ಶಾಸನದ ಪೂರ್ಣ ಅಧ್ಯಯನ ಇತಿಹಾಸದ ಮತ್ತಷ್ಟು ಮಹತ್ವದ ಸಂಗತಿಗಳನ್ನು ಬಯಲಿಗೆ ತರುವ ಸಾಧ್ಯತೆಯಿದ್ದು, ಆ ಬಗ್ಗೆ ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ. ಪ್ರಶಾಂತ್ ಶೆಟ್ಟಿ, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಹಾಗೂ ಭಂಡಾರ್ಕರ್ಸ್ ಕಾಲೇಜಿನ ವಿದ್ಯಾರ್ಥಿಗಳು ಶಾಸನ ಅಧ್ಯಯನದಲ್ಲಿ ಬಹಳವಾಗಿ ಸಹಕರಿಸಿದರು ಎಂದು ಸ್ಮರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.