ಮಂಗಳೂರು: ದೇರಳಕಟ್ಟೆಯ ದಂತ ವೈದ್ಯ ವಿದ್ಯಾರ್ಥಿ ಹಾಗೂ ಆತನ ಸಹಪಾಠಿ ಸ್ನೇಹಿತೆಯನ್ನು ಅಪಹರಿಸಿ, ಹಲ್ಲೆ ನಡೆಸಿ, ಅಶ್ಲೀಲ ಭಂಗಿಯಲ್ಲಿ ಚಿತ್ರೀಕರಿಸಿ ಹಣಕ್ಕಾಗಿ ಬೆದರಿಕೆ ಒಡ್ಡಿದ ಎಂಟು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸುರತ್ಕಲ್ನ ಶಮೀರ್ (24), ದೇರಳಕಟ್ಟೆಯ ಇಕ್ಬಾಲ್ (21), ಸುರತ್ಕಲ್ನ ಸಂಶುದ್ದೀನ್ (23), ದೇರಳಕಟ್ಟೆಯ ರವೂಫ್ (22), ಮುಡಿಪುವಿನ ನವಾಜ್ (28) ಮಂಜನಾಡಿಯ ನಿಸಾರ್ (18), ದೇರಳಕಟ್ಟೆಯ ಆರ್ಷಾದ್ (18), ಸರ್ಫಾನ್ ಹುಸೈನ್ (21) ಬಂಧಿತ ಆರೋಪಿಗಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದೇರಳಕಟ್ಟೆಯ ದಂತವೈದ್ಯ ಕಾಲೇಜೊಂದರ ವಿದ್ಯಾರ್ಥಿಯು ಸಹಪಾಠಿ ಸ್ನೇಹಿತೆ ಜತೆ ದೇರಳಕಟ್ಟೆಯ ಹಾಸ್ಟೆಲ್ ಬಳಿ ಬುಧವಾರ ರಾತ್ರಿ ನಿಂತಿದ್ದಾಗ ಅಲ್ಲಿಗೆ ಬಂದ ಆರೋಪಿಗಳು ವಿದ್ಯಾರ್ಥಿಯ ಕಾರನ್ನು ಸುತ್ತುವರಿದರು. ಅದೇ ಕಾರಿನಲ್ಲಿ ಅವರಿಬ್ಬರನ್ನು ಕೂರಿಸಿ ಕಣ್ಣಿಗೆ ಬಟ್ಟೆ ಕಟ್ಟಿ ಜನವಾಸ ಇಲ್ಲದ ಮನೆಯೊಂದಕ್ಕೆ ಕರೆದೊಯ್ದು, ಜೀವ ಬೆದರಿಕೆ ಒಡ್ಡಿ ವಿದ್ಯಾರ್ಥಿಯು ಸ್ನೇಹಿತೆ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಮಾಡಿ, ಆ ದೃಶ್ಯವನ್ನು ವಿದ್ಯಾರ್ಥಿಗಳದೇ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದರು. ಅಲ್ಲಿಂದ ವಿದ್ಯಾರ್ಥಿಗಳನ್ನು ಇರಾ ಗ್ರಾಮದ ಕಲ್ಪನೆ ಎಂಬಲ್ಲಿ ಬಂಧನದಲ್ಲಿಟ್ಟಿದ್ದರು. ₨ 25 ಲಕ್ಷ ನೀಡದಿದ್ದರೆ, ಚಿತ್ರೀಕರಿಸಿದ ದೃಶ್ಯಾವಳಿಗಳನ್ನು ಅಂತರ್ಜಾಲಕ್ಕೆ ಅಪ್ಲೋಡ್ ಮಾಡುತ್ತೇವೆ. ಪ್ರಾಂಶುಪಾಲರಿಗೆ ತಿಳಿಸಿ ಮಾನ ಹರಾಜು ಮಾಡುತ್ತೇವೆ ಎಂದು ಬೆದರಿಕೆ ಒಡ್ಡಿದ್ದರು.
ಭಯಗೊಂಡ ವಿದ್ಯಾರ್ಥಿ ₨ 3 ಲಕ್ಷ ನೀಡಲು ಒಪ್ಪಿದ್ದ. ಆರೋಪಿಗಳು ಹೇಳಿದ ಜಾಗಕ್ಕೆ ಹಣ ಕೊಂಡೊಯ್ಯುವಾಗ ವಿದ್ಯಾರ್ಥಿನಿಯನ್ನು ಪೊಲೀಸರೂ ಹಿಂಬಾಲಿಸಿ ಅವರನ್ನು ಸುತ್ತುವರಿದಿದ್ದರು. ಆಗ ಆರೋಪಿಗಳು ಯದ್ವಾತದ್ವ ಕಾರು ಚಲಾಯಿಸಿ ಅಲ್ಲಿಂದ ತಪ್ಪಿಸಿಕೊಂಡಿದ್ದರು. ಕಾಟಿಪಳ್ಳದ ಮನೆಯೊಂದರಲ್ಲಿ ಅಡಗಿದ್ದವರನ್ನು ಪೊಲೀಸರು ಬಂಧಿಸಿದರು.