ಸಿಂದಗಿ: ಮೂಲಸೌಲಭ್ಯ ಒದಗಿಸುವುದು ಸೇರಿದಂತೆ ಪ್ರಮುಖ ಒಂಬತ್ತು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ, ಶಾಲೆಗೆ ಬೀಗ ಜಡಿಯುವ ಮೂಲಕ ಪ್ರತಿಭಟಿಸಿದ ಘಟನೆ ಸಿಂದಗಿ ತಾಲ್ಲೂಕಿನ ಯಂಕಂಚಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದಿದೆ.
ಶಾಲಾ ವೇಳೆಯನ್ನು ಕೈಪಿಡಿಯಂತೆ ಮುಂಜಾನೆ 10 ಗಂಟೆಗೆ ಪ್ರಾರಂಭಿಸಬೇಕು. ಕ್ರೀಡಾ ಸಾಮಗ್ರಿಗಳನ್ನು ಖರೀದಿಸಿ ವಿದ್ಯಾರ್ಥಿಗಳಿಗೆ ಪೂರೈಸಬೇಕು, ಶೌಚಾಲಯ ಕಾಮಗಾರಿ ಪೂರ್ಣಗೊಳಿಸುವುದು, ನೀರಿನ ಸೌಲಭ್ಯ ಒದಗಿಸಿ ಕೊಡುವುದು, ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರ ಸ್ಥಾಪಿಸುವುದು, ದಿನಂಪ್ರತಿ ಬಿಸಿಯೂಟದಲ್ಲಿ ಅನ್ನ ಸಾರು ಮಾಡುವುದು, ಶಾಲೆಯಲ್ಲಿನ ಕಂಪ್ಯೂಟರ್ಗಳನ್ನು ದುರಸ್ತಿಗೊಳಿಸುವುದು, ಆಟದ ಮೈದಾನ ಸಿದ್ದಗೊಳಿಸುವುದು, ಧ್ವಜದ ಕಟ್ಟೆ ಕಟ್ಟಿಸಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ನೇತೃತ್ವದಲ್ಲಿ ಶಾಲಾ ಮೈದಾನದಲ್ಲಿ ವಿದ್ಯಾರ್ಥಿಗಳು ಕುಳಿತು ಮೂರು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಕರವೇ ಉತ್ತರ ಕರ್ನಾಟಕ ವಲಯದ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಗ್ರಾಮ ಘಟಕದ ಅಧ್ಯಕ್ಷ ಸಿದ್ರಾಮ ಹಳ್ಳಿ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಜಕ್ಕೂ ಸಾಸನೂರ, ಗ್ರಾಮ ಪಂಚಾಯತ ಅಧ್ಯಕ್ಷ ಪಿ.ಬಿ.ಕುಲಕರ್ಣಿ, ಬಸೂ ಅಳ್ಳಗಿ, ಶರಣು ಪತ್ತಾರ, ಎಂ.ಎಸ್.ತಳವಾರ ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬಿರಾದಾರ ಶಾಲೆಗೆ ಧಾವಿಸಿ ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡುವದರ ಜೊತೆಗೆ ಈಗಿದ್ದ ಮುಖ್ಯ ಶಿಕ್ಷಕರನ್ನು ಬದಲಿಸಿ ಹಿರಿಯ ಅಧ್ಯಾಪಕರಿಗೆ ಅಧಿಕಾರ ವಹಿಸಿ ಕೊಟ್ಟ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಸ್ಥಗಿತಗೊಳಿಸಿ, ಶಾಲೆ ಬೀಗ ತೆರುವು ಗೊಳಿಸಿದರು.