ಗೋಣಿಕೊಪ್ಪಲು: ವಿದ್ಯಾರ್ಥಿಗಳು ಅಸಾಧ್ಯ ಎಂಬ ಶಬ್ದವನ್ನೇ ಉಚ್ಚಾರಣೆ ಮಾಡಬಾರದು. ಮನಸ್ಸು ಮಾಡಿದರೆ ಜೀವನದಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂದು ಗೋಣಿಕೊಪ್ಪಲು ಅನುದಾನಿತ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಕೃಷ್ಣ ಚೈತನ್ಯ ಹೇಳಿದರು.
ಸಮೀಪದ ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ಸಂಘ ಮಕ್ಕಳಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸಲು ಇರುವ ಪ್ರಮುಖ ವೇದಿಕೆ. ಇದನ್ನು ವಿದ್ಯಾರ್ಥಿ ಜೀವನದಲ್ಲಿ ಸೂಕ್ತವಾಗಿ ಬಳಸಿಕೊಳ್ಳಬೇಕು. ಸಂಘದ ಪದಾಧಿಕಾರಿಗಳು ಉತ್ತಮ ನಾಯಕತ್ವ ಗುಣ ರೂಢಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಸಮಯಪರಿಪಾಲನೆ ಶಿಸ್ತು ಅಗತ್ಯ. ಪೋಷಕರು, ಹಿರಿಯರು, ಗುರುಗಳಿಗೆ ವಿದ್ಯಾರ್ಥಿಗಳು ವಿಧೇಯರಾಗಿರುವ ಮೂಲಕ ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.
ವಿದ್ಯಾಸಂಸ್ಥೆ ಆಡಳಿತ ಮಂಡಳಿ ಕಾರ್ಯದರ್ಶಿ ಕಳ್ಳಿಚಂಡ ಸಿ.ಜಯ ಮಾತನಾಡಿರು. ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಪುಟ್ಟರಾಜು ಕಾರ್ಯುಕ್ರಮ ಉದ್ಘಾಟಿಸಿದರು.
ನಿರ್ದೇಶಕರಾದ ಕೋಶಾಧಿಕಾರಿ ಅಡ್ಡೇಂಗಡ ದೇವಯ್ಯ, ಸಹಕೋಶಾಧಿಕಾರಿ ಕೇಶವ ಮೂರ್ತಿ, ನಿರ್ದೇಶಕ ಕಾಟಿಮಾಡ ಶರೀನ್ ಮುತ್ತಣ್ಣ ಹಾಜರಿದ್ದರು.
ಪ್ರಾಂಶುಪಾಲ ಕೆ.ವಿ. ಶ್ರೀಮೂರ್ತಿ, ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕ ಕೆ. ಚಂದ್ರಶೇಖರ್ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಕೆ.ಜಿ. ಅಶ್ವಿನಿಕುಮಾರ್ ಸ್ವಾಗತಿಸಿದರು. ಉಪನ್ಯಾಸಕರಾದ ಎನ್.ಕೆ.ಪ್ರಭು, ಡಿ.ಎನ್.ಸುಬ್ಬಯ್ಯ ಅತಿಥಿಗಳನ್ನು ಪರಿಚಯಿಸಿದರು. ತಿಮ್ಮರಾಜು ನಿರೂಪಿಸಿದರು. ಪ್ರಭುಕುಮಾರ್ ವಂದಿಸಿದರು.