ಯಲಹಂಕ: `ವಿದ್ಯಾರ್ಥಿಗಳು ಪದವಿ ಶಿಕ್ಷಣ ಪಡೆಯುವ ಜತೆಗೆ ಸಾಮಾನ್ಯ ಜ್ಞಾನ ಗಳಿಸಿಕೊಳ್ಳುವುದೂ ಬಹಳ ಮುಖ್ಯ~ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ಅಭಿಪ್ರಾಯಪಟ್ಟರು.
ಇಲ್ಲಿನ ಶೇಷಾದ್ರಿಪುರ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ `ಸ್ನೇಹ-ಸಮ್ಮಿಲನ~ ಹಾಗೂ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, `ಕೇವಲ ಅತ್ಯುತ್ತಮ ಅಂಕ ಗಳಿಸುವುದರಿಂದ ಮಾತ್ರ ಉತ್ತಮ ಪ್ರಜೆಯಾಗಲು ಸಾಧ್ಯವಿಲ್ಲ. ಬದಲಿಗೆ, ವಿನಯ, ಸಂಸ್ಕಾರ ಮತ್ತು ನಾಗರಿಕತೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು~ ಎಂದು ಸಲಹೆ ಮಾಡಿದರು.
ಶೇಷಾದ್ರಿಪುರ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ 12 ಹಿರಿಯರನ್ನು ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎನ್.ಆರ್.ಪಂಡಿತಾರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಗೌರವ ಪ್ರಧಾನ ಕಾರ್ಯದರ್ಶಿ ಡಾ. ವೂಡೆ ಪಿ.ಕೃಷ್ಣ, ಉಪಾಧ್ಯಕ್ಷರಾದ ಟಿ.ಎಸ್. ಹೆಂಜಾರಪ್ಪ, ಡಬ್ಲ್ಯು.ಎಚ್.ಅನಿಲ್ ಕುಮಾರ್, ಕೋಶಾಧ್ಯಕ್ಷ ಬಿ.ಎಂ.ಪಾರ್ಥಸಾರಥಿ, ಜಂಟಿ ಕಾರ್ಯದರ್ಶಿ ಎ.ಆರ್.ಶ್ರೀನಿವಾಸಯ್ಯ, ಸಹಾಯಕ ಕಾರ್ಯದರ್ಶಿ ಸರೋಜಾ ಕೆ.ಎಂ.ನಂಜಪ್ಪ, ಪ್ರಾಂಶುಪಾಲ ಡಾ. ಎಂ.ಪ್ರಕಾಶ್ ಇತರರು ಉಪಸ್ಥಿತರಿದ್ದರು.