ಬೆಂಗಳೂರು: ನಗರದ ಯಲಹಂಕ, ಹೆಬ್ಬಾಳ ಮತ್ತು ರಾಜಾಜಿನಗರದಲ್ಲಿ ಸಂಭವಿಸಿದ ಪ್ರತ್ಯೇಕ ಅಪಫಾತಗಳಲ್ಲಿ ಕಾಲೇಜು ವಿದ್ಯಾರ್ಥಿನಿ ಸೇರಿ ಮೂರು ಮಂದಿ ಸಾವನ್ನಪ್ಪಿದ್ದಾರೆ.ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೌಂಟ್ ಕಾರ್ಮೆಲ್ ಕಾಲೇಜು ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಯಲಹಂಕ ಪೊಲೀ ಠಾಣೆ ಸಮೀಪ ಶನಿವಾರ ಬೆಳಿಗ್ಗೆ ನಡೆದಿದೆ.
ಎಂಸಿಎ ತೃತೀಯ ವರ್ಷದ ವಿದ್ಯಾರ್ಥಿನಿ ಪೂಜಾ ಸಲಗಾಂವ್ಕರ್ (20) ಮೃತಪಟ್ಟವರು. ಯಲಹಂಕ ನ್ಯೂಟೌನ್ ನಿವಾಸಿಯಾಗಿದ್ದ ಅವರು ಬೆಳಿಗ್ಗೆ 8.15ರ ಸುಮಾರಿಗೆ ಕಾಲೇಜಿಗೆ ಹೋಗುತ್ತಿದ್ದರು. ಯಲಹಂಕ ಪೊಲೀಸ್ ಠಾಣೆ ಸಮೀಪ ಹಿಂದಿನಿಂದ ಬಂದ ಲಾರಿ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯಿತು. ಕೆಳಗೆ ಬಿದ್ದ ಪೂಜಾ ಅವರ ಮೇಲೆ ಅದೇ ವಾಹನ ಹರಿದ ಪರಿಣಾಮ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಲಾರಿ ಇನ್ನೊಂದು ಬೈಕ್ಗೂ ಡಿಕ್ಕಿ ಹೊಡೆಯಿತು. ಬೈಕ್ ಸವಾರ ರಾಬರ್ಟ್ ಎಂಬುವರಿಗೆ ಗಾಯವಾಗಿದೆ. ಡಿಕ್ಕಿ ಹೊಡೆದ ನಂತರ ರಾಬರ್ಟ್ ಎಡ ಭಾಗಕ್ಕೆ ಬಿದ್ದರು. ರಸ್ತೆಯ ಬಲ ಭಾಗಕ್ಕೆ ಬಿದ್ದ ಪೂಜಾ ಅವರ ಮೇಲೆ ವಾಹನ ಹರಿದಿದೆ ಎಂದು ಪೊಲೀಸರು ಹೇಳಿದ್ದಾರೆ.
ಎಂಎಸ್ಐಎಲ್ ಉದ್ಯೋಗಿ ಅರುಣ್ ಸಲಗಾಂ ವ್ಕರ್ ಅವರ ಒಬ್ಬಳೇ ಮಗಳು ಪೂಜಾ. ಅವರು ಕಾರವಾರ ಜಿಲ್ಲೆಯವರಾಗಿದ್ದು, ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಲಾರಿ ಚಾಲಕನನ್ನು ಬಂಧಿಸಿ ವಾಹನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಯಲಹಂಕ ಸಂಚಾರ ಠಾಣೆ ಇನ್ಸ್ಟೆಕ್ಟರ್ ಕೆ.ಅಶೋಕ್ ಕುಮಾರ್ ತಿಳಿಸಿದ್ದಾರೆ.
ರಾಜಾಜಿನಗರ: ನಿಂತಿದ್ದ ಮಿನಿ ಲಾರಿಗೆ ಡಿಕ್ಕಿ ಹೊಡೆದ ಪರಿ ಣಾಮ ಬೈಕ್ನ ಹಿಂಬದಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಎಪಿಎಂಸಿ ಯಾರ್ಡ್ನ ಒಳಗೆ ಶುಕ್ರವಾರ ರಾತ್ರಿ ನಡೆದಿದೆ. ನಂದಿನಿಲೇಔಟ್ನ ಉಮೇಶ್ (18) ಮೃತಪಟ್ಟವರು.
ಉಮೇಶ್ ದ್ವಿಚಕ್ರ ವಾಹನ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದರು. ಗೆಳೆಯ ಗಂಗಾಧರ್ ಜತೆಗೆ ಅವರು ರಾತ್ರಿ ಹತ್ತು ಗಂಟೆ ಸುಮಾರಿಗೆ ಮನೆಗೆ ಹೋಗುತ್ತಿದ್ದರು. ಬೈಕ್ ಓಡಿಸುತ್ತಿದ್ದ ಗಂಗಾಧರ್ ಮುಂದೆ ಲಾರಿ ನಿಂತಿದ್ದನ್ನು ಗಮನಿಸಿದೆ ಹಿಂದಿನಿಂದ ಡಿಕ್ಕಿ ಹೊಡೆದರು. ಗಂಗಾಧರ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜಾಜಿನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ಬಾಳ: ನಾಗವಾರದ ಸಮೀಪ ರಸ್ತೆ ಬದಿ ನಿಂತಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಅಂತೋಣಪ್ಪ (37) ಮೃತಪಟ್ಟವರು. ಎಲೆಕ್ಟ್ರಿಷಿಯನ್ ಆಗಿದ್ದ ಅವರು ಬೈರತಿ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ. ಹೆಬ್ಬಾಳ ಸಂಚಾರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.