ಕಾರವಾರ: ಮನೆ ಸುತ್ತ ಹಾಕಿದ್ದ ತಂತಿ ಬೇಲಿಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ವೃದ್ಧೆ ಹಾಗೂ ಯುವಕ ಮೃತಪಟ್ಟು ಮತ್ತೊಬ್ಬ ಗಾಯಗೊಂಡ ಘಟನೆ ನಗರದ ಸುಂಕೇರಿ ಗಾಬೀತವಾಡಾದಲ್ಲಿ ಶುಕ್ರವಾರ ನಡೆದಿದೆ.
ಮೃತಪಟ್ಟವರನ್ನು ಲಕ್ಷ್ಮಿ ವಿಷ್ಣು ತುಳಸೇಕರ (70), ಇವರ ಮೊಮ್ಮಗ ಲಕ್ಷ್ಮಣ ಪ್ರಕಾಶ ತುಳಸೇಕರ್ (25) ಹಾಗೂ ಗಾಯಗೊಂಡವನನ್ನು ರವಿ ಜೋಶಿ ಎಂದು ಗುರುತಿಸಲಾಗಿದೆ.
ಮನೆಯ ಬದಿಯಲ್ಲಿ ಹಾಕಿದ್ದ ತಂತಿ ಬೇಲಿಯನ್ನು ಬೆಳಿಗ್ಗೆ 10ರ ವೇಳೆಯಲ್ಲಿ ದಾಟುವಾಗ ಲಕ್ಷ್ಮಿ ತುಳಸೇಕರ ಅವರಿಗೆ ವಿದ್ಯುತ್ ತಗುಲಿದೆ. ಇದನ್ನು ನೋಡಿದ ಮೊಮ್ಮಗಳು ಕೂಗಿಕೊಂಡಳು. ಅಲ್ಲೇ ಸಮೀಪದಲ್ಲಿದ್ದ ಲಕ್ಷ್ಮಣ ಪ್ರಕಾಶ್ ಅವರು ಅಜ್ಜಿಯನ್ನು ರಕ್ಷಿಸಲು ಹೋದಾಗ ಆತನಿಗೂ ವಿದ್ಯುತ್ ತಗುಲಿದೆ. ಈ ಸಂದರ್ಭದಲ್ಲಿ ಓಡಿ ಬಂದ ರವಿ ಜೋಶಿ ಅವರ ಇಬ್ಬರನ್ನೂ ರಕ್ಷಿಸಲು ಹೋಗಿ ಗಾಯಗೊಂಡಿದ್ದಾರೆ.
ಸ್ಥಳೀಯರು ಕೂಡಲೇ ವಿಷಯವನ್ನು ಹೆಸ್ಕಾಂಗೆ ತಿಳಿಸಿದರು. ಹೆಸ್ಕಾಂನವರು ತಕ್ಷಣವೇ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿದರಾದರೂ ಅಷ್ಟರಲ್ಲೇ ಇಬ್ಬರೂ ಸಾವನ್ನಪ್ಪಿದ್ದರು. ಹೆಸ್ಕಾಂ ನಿರ್ಲಕ್ಷ್ಯದ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.