ಹೊಳೆನರಸೀಪುರ: `ಗ್ರಾಮೀಣ ಪ್ರದೇಶಕ್ಕೆ ಇಂತಿಷ್ಟು ಗಂಟೆ ಮೂರು ಫೇಸ್ ವಿದ್ಯುತ್ ಸರಬರಾಜು ಮಾಡಬೇಕು ಎಂದು ಇಲಾಖೆ ನಿಗದಿ ಪಡಿಸಿದ್ದರೂ, ಆ ಪ್ರಮಾಣದಲ್ಲಿ ವಿದ್ಯುತ್ ಸರಬರಾಜಾಗುತ್ತಿಲ್ಲ' ಎಂದು ಆರೋಪಿಸಿ ತಾಲ್ಲೂಕಿನ ಗುಂಜೇವು, ಮಾರನಾಯಕನಹಳ್ಳಿ, ಸೋಮನಹಳ್ಳಿ, ಈಡಿಗನಹೊಸೂರು, ದೇವರಮುದ್ದನಹಳ್ಳಿ ಗ್ರಾಮದ ರೈತರು ಗುರುವಾರ ಇಲ್ಲಿನ ಸೆಸ್ಕ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
`ಗ್ರಾಮೀಣ ಪ್ರದೇಶಕ್ಕೆ ಬೆಳಿಗ್ಗೆ 2 ಗಂಟೆ ಮತ್ತು ಸಂಜೆ 1 ಗಂಟೆ ತ್ರೀ ಫೇಸ್ ವಿದ್ಯುತ್ ನೀಡುತ್ತೇವೆ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ ನಮ್ಮ ಹಳ್ಳಿಗಳಿಗೆ 15 ದಿನಗಳಿಂದ ವಿದ್ಯುತ್ ಸರಬ ರಾಜಾಗಿಲ್ಲ. ಕೆಲವೊಮ್ಮೆ 10 ರಿಂದ 15 ನಿಮಿಷ ವಿದ್ಯುತ್ ಬಂದು ಹೋಗುತ್ತಿದೆ. ಇದರಿಂದಾಗಿ ಜಮೀನಿಗೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಬೆಳೆಗಳು ಒಣಗುತ್ತಿವೆ. ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ' ಎಂದು ರೈತ ಮುಖಂಡ ಗುಂಜೇವು ಶಿವಣ್ಣ ದೂರಿದರು.
`ಇಲಾಖೆಯ ಅಧಿಕಾರಿಗಳು ಟ್ರಾನ್ಸ್ಫಾರ್ಮರ್ಗೆ ಆಯಿಲ್ ಹಾಕಲು ಹಾಗೂ ಬಿಡಿ ಭಾಗಗಳಿಗಾಗಿ ರೈತರಿಂದಲೇ ಹಣ ಪಡೆಯುತ್ತಾರೆ' ಎಂದು ನಾಗೇಶ್ ದೂರಿದರು.
ಇನ್ನು ಮುಂದೆ ಸರ್ಕಾರ ನಿಗದಿ ಪಡಿಸಿರುವ ಪ್ರಮಾಣದಲ್ಲಿ ವಿದ್ಯುತ್ ನೀಡದಿದ್ದರೆ ಹಳ್ಳಿಗಳ ರೈತರು ಮತ್ತು ಮಹಿಳೆಯರು ಬಂದು ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸುತ್ತೇವೆ' ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಕಿರಣ್ ರೈತರೊಡನೆ ಮಾತುಕತೆ ನಡೆಸಿ ಮನವಿ ಸ್ವೀಕರಿಸಿದರು. ನಂತರ ಮುಷ್ಕರ ಕೊನೆಗೊಳಿಸಿದರು.