ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಅಸಮರ್ಪಕ ವಿದ್ಯುತ್ ಸರಬರಾಜಿನಿಂದ ಒಂದಡೆ ರೈತರು ಬೆಳೆದಿದ್ದ ಬೆಳೆಗಳು ಒಣಗುತ್ತಿದ್ದರೆ, ಮತ್ತೊಂದೆಡೆ ಪಟ್ಟಣ ಪ್ರದೇಶದ ಜನರ ವಿದ್ಯುತ್ ಚೆಲ್ಲಾಟದಿಂದ ದಿನನಿತ್ಯದ ವ್ಯವಹಾರಗಳಿಗೂ ತೊಂದರೆ ಪಡುವಂತಾಗಿದೆ.
ಅನಿಯಮಿತ ವಿದ್ಯುತ್ ಪೂರೈಕೆ ಪರಿಣಾಮ ರೈತರು ಬೆಳೆದ ಬೆಳೆಗಳಿಗೆ ನೀರುಣಿಸಲು ಆಗುತ್ತಿಲ್ಲ. ಕೊಳವೆ ಬಾವಿಗಳಿದ್ದರೂ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ.
ಬರದ ಕಾರಣ ಕೆರೆ-ಕುಂಟೆಗಳಲ್ಲಿ ನೀರು ಬತ್ತಿಹೋಗಿದ್ದು, ಜಾನವಾರುಗಳು ಗುಟುಕು ನೀರಿಗೂ ಪರದಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ನೆಲಗಡಲೆ, ಜೋಳ, ರಾಗಿ, ತರಕಾರಿ ಹಾಗೂ ಮತ್ತಿತರ ಬೆಳೆಗಳು ನೀರಿಲ್ಲದೆ ಸೊರಗಿ ನಿಂತಿವೆ.
ಜೀವನ ನಿರ್ವಹಣೆಗಾಗಿ ಕೆಲವು ರೈತರು ಕೂಲಿ ಕೆಲಸಕ್ಕೆ ಹೋಗಿ ಹಣ ಹೊಂದಿಸುತ್ತಾರೆ. ಅನಿಯಮಿತ ವಿದ್ಯುತ್ ಪೂರೈಕೆ ಸಲುವಾಗಿ ವ್ಯಾಪಾರ ವಹಿವಾಟು ಕಳೆಗುಂದಿವೆ. ಹೀಗಾಗಿ, ಕೂಲಿ ಕೆಲಸ ಕಡಿಮೆಯಾಗುತ್ತಿವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು 3 ವರ್ಷಗಳಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಉಚಿತ ವಿದ್ಯುತ್ ಒದಗಿಸುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದೆ. ಕುಡಿಯುವ ನೀರಿಗೂ ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ತಾಲ್ಲೂಕು ಪ್ರಾಂತ ರೈತ ಸಂಘ ಅಧ್ಯಕ್ಷ ಆರ್ಚಂದ್ರಶೇಖರರೆಡ್ಡಿ ತಿಳಿಸಿದರು.