ರಿವಾಲ್ವಾರ್ ಹಿಡಿದು ನಟ ಉಪೇಂದ್ರ ರಾಜ ಗಾಂಭೀರ್ಯದಲ್ಲಿ ಹೆಜ್ಜೆಯಿಡುತ್ತಿದ್ದರೆ, ಅವರ ಬೆನ್ನಹಿಂದೆ ಬಹುಪರಾಕ್ ಹೇಳಲು ನಾಲ್ಕಾರು ಮಂದಿ. ತುಸು ಹಿಂಬದಿಯಲ್ಲೇ ಸಿಡಿದ ಪೆಟ್ರೋಲ್ ಬಾಂಬ್ ಇದು ಪಕ್ಕಾ ಆ್ಯಕ್ಷನ್ ಸೀನ್ ಎನ್ನುವುದನ್ನು ಸಾರುವಂತಿತ್ತು. ಶೂಟಿಂಗ್ ಸ್ಪಾಟ್ನಲ್ಲಿ ಬಿಳಿ ಲುಂಗಿ, ಅಂಗಿ ತೊಟ್ಟ ಹುಡುಗರೂ ಮೆರೆದಿದ್ದರು.
ಇವು ‘ಬ್ರಹ್ಮ’ನ ಹಾದಿಯ ಚಿತ್ರಗಳು! ಆರ್. ಚಂದ್ರು ನಿರ್ದೇಶನದ ‘ಬ್ರಹ್ಮ’ ಚಿತ್ರತಂಡ ಅಂತಿಮ ದಿನದ ಚಿತ್ರೀಕರಣವನ್ನು ನೆಪವಾಗಿಟ್ಟುಕೊಂಡು ಮಾಧ್ಯಮಗಳಿಗೆ ಮುಖಾಮುಖಿಯಾಯಿತು. ಇಲ್ಲಿಯವರೆಗೂ ಸಾಗಿದ ಹಾದಿಯ ಕುರಿತಷ್ಟೇ ಅಲ್ಲ ಆ ಹಾದಿಯಲ್ಲಿನ ವಿಘ್ನಗಳ ಕುರಿತೂ ಮಾಹಿತಿ ನೀಡಿತು.
‘ಸಿನಿಮಾವನ್ನು ಜನರಿಗೆ ತಲುಪಿಸುವುದೇ ಸವಾಲು. ಅಕ್ಟೋಬರ್ನಲ್ಲಿ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಯಾವುದೇ ವಿಚಾರದಲ್ಲೂ ರಾಜಿ ಮಾಡಿಕೊಳ್ಳದ ನಿರ್ದೇಶಕರ ಮನಸ್ಥಿತಿಯ ಕಾರಣ ಚಿತ್ರ ತಡವಾಯಿತು. ನಿರ್ದೇಶಕರ ಆ ಮನೋಭಾವವೇ ಚಿತ್ರ ಅದ್ದೂರಿಯಾಗಿ ಮೂಡಿಬರಲು ಕಾರಣ’ ಎಂದರು ಉಪೇಂದ್ರ. ಪ್ರತಿ ಪತ್ರಿಕಾಗೋಷ್ಠಿಯಲ್ಲಿ ಹೇಳುವಂತೆ ನಿರ್ದೇಶಕ ಚಂದ್ರು ಅವರೇ ಚಿತ್ರದ ನೈಜ ಬ್ರಹ್ಮ. ‘ಬ್ರಹ್ಮ,’ ಬ್ರಹ್ಮನಾಗಿಯೇ ತೆರೆಗೆ ಬರಬೇಕು ಎಂದು ಪ್ರಶಂಸಿಸಿದರು. ಚಿತ್ರದ ಟ್ರೇಲರ್ ನೋಡಿಯೇ ಉಪೇಂದ್ರ ಹೆಚ್ಚು ಖುಷಿಪಟ್ಟಿದ್ದರಂತೆ.
ಚಿತ್ರದ ಶೀರ್ಷಿಕೆಯ ಬಗ್ಗೆ ಮಾತನಾಡಿದ್ದು ನಿರ್ದೇಶಕ ಚಂದ್ರು. ಬ್ರಹ್ಮನಿಗೆ ಶಿವ ಶಾಪಕೊಟ್ಟಿದ್ದು, ಆನಂತರ ಚಿತ್ರತಂಡ ಬ್ರಹ್ಮನಾಮ ಜಪಿಸಿದ್ದು, ಶಿವನ ಕೋಪಕ್ಕೆ ತುತ್ತಾದ ಚಿತ್ರತಂಡಕ್ಕೆ ಎದುರಾದ ವಿಘ್ನಗಳು... ಹೀಗೆ ಅವರ ಮಾತಿನ ಪೂರ್ಣ ಸರಣಿ ಶೀರ್ಷಿಕೆಯತ್ತಲೇ ತಿರುಗಿತು. ‘ಉಪೇಂದ್ರ ನಿರ್ದೇಶಕರ ಲೆಜೆಂಡ್’ ಎಂದು ಬಣ್ಣಿಸಿದ ನಿರ್ದೇಶಕರು, ಉಪೇಂದ್ರರ ಸೃಜನಾತ್ಮಕ ಮನಸ್ಸಿಗೆ ಈ ಟೈಟಲ್ ಅನ್ವರ್ಥ ಎಂದರು.
ಉಪೇಂದ್ರ ಚಿತ್ರ ಎಂದರೆ ಹೊಸತನ ಎನ್ನುವ ನಿರೀಕ್ಷೆಯಲ್ಲಿರುವ ಪ್ರೇಕ್ಷಕರಿಗೆ ಬ್ರಹ್ಮನಲ್ಲಿ ಭರಪೂರವಾಗಿ ಸಂಭ್ರಮವಂತೆ. ಎಲ್ಇಡಿ ಉಡುಗೆ ತೊಟ್ಟು ಕುಣಿದಿರುವ ಡ್ಯಾನ್ಸ್ ಗಮನ ಸೆಳೆಯುತ್ತದೆ. ಮುಂಬೈನಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ನಾಯಕ, ನಾಯಕಿ ಸೇರಿ 30 ಮಂದಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಚಿತ್ರದ ಡಬ್ಬಿಂಗ್ ಹಕ್ಕುಗಳು ಹಿಂದಿಗೆ ಮಾರಾಟವಾಗಿದ್ದು, ತಮಿಳಿನಲ್ಲೂ ಡಬ್ಬಿಂಗ್ ನಡೆದಿದೆಯಂತೆ. ತೆಲುಗಿಗೂ ಡಬ್ ಮಾಡುವ ಸನ್ನಾಹದಲ್ಲಿದ್ದಾರೆ ನಿರ್ದೇಶಕರು. ನಾಯಕಿ ಪ್ರಣೀತಾ, ನಿರ್ಮಾಪಕ ಮಂಜುನಾಥ ಬಾಬು, ಥ್ರಿಲ್ಲರ್ ಮಂಜು ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.