ಇತ್ತೀಚಿನ ದಿನಗಳಲ್ಲಿ ನಗರವಾಸಿಗಳು ಹಬ್ಬಗಳನ್ನು ರಜಾದಿನದ ಮೂಡಿನಲ್ಲಿ ಕಳೆಯುವ ಪರಿಪಾಠ ಬೆಳೆಸಿಕೊಳ್ಳುತ್ತಿದ್ದಾರೆ. ಹಬ್ಬಗಳಿಗೆ ಒಂದೊಂದು ಇತಿಹಾಸವಿರುವಂತೆ, ಅದಕ್ಕೊಂಡು ಗ್ರಾಮ್ಯದ ಸೊಗಡಿದೆ.
ನಗರವಾಸಿಗಳೂ ಕೂಡಾ ಗ್ರಾಮೀಣ ಪ್ರದೇಶದ ಸೊಗಡನ್ನು ಅನುಭವಿಸುವಂತಹ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ವಿಶ್ವ ಒಕ್ಕಲಿಗರ ಮಹಾವೇದಿಕೆ ಸಂಕ್ರಾಂತಿ ಹಬ್ಬವನ್ನು ವಿಭಿನ್ನವಾಗಿ ನಡೆಸಲು ಉದ್ದೇಶಿಸಿದೆ.
ವಿಶ್ವ ಒಕ್ಕಲಿಗರ ಮಹಾ ವೇದಿಕೆ ಹಾಗೂ ರಾಜಾಜಿನಗರ ಒಕ್ಕಲಿಗರ ಹಿತರಕ್ಷಣಾ ವೇದಿಕೆ ಪ್ರತಿ ವರ್ಷ ತನ್ನ ವಾರ್ಷಿಕೋತ್ಸವ ಹಾಗೂ ಸಂಕ್ರಾಂತಿ ಹಬ್ಬವನ್ನು ಈ ಪರಿಕಲ್ಪನೆಯೊಂದಿಗೆ ನಗರದ ವಿವಿಧ ಬಡಾವಣೆಗಳಲ್ಲಿ ಆಚರಿಸುತ್ತಾ ಬರುತ್ತಿದೆ.
ನಗರವಾಸಿಗಳಿಗೆ ಈ ಮೂಲಕ ಸಂಕ್ರಾಂತಿ ಹಬ್ಬದ ಸೊಬಗನ್ನು ಕಟ್ಟಿಕೊಡುವುದರ ಜತೆಗೆ ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುವಂತಹ ಅನೇಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರುತ್ತಿದೆ. ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವುದರ ಜತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಕೂಡ ಈ ಸಂದರ್ಭದಲ್ಲಿ ಸನ್ಮಾನಿಸುತ್ತಾ ಬರುತ್ತಿದೆ.
ಸೋಮವಾರ ಸಂಜೆ ನಾಲ್ಕು ಗಂಟೆಗೆ ರಾಜಾಜಿನಗರದ ಶ್ರಿರಾಮ ಮಂದಿರ ಆಟದ ಮೈದಾನದಲ್ಲಿ ಈ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ. ಸಾಹಿತಿ ಸಿ.ಪಿ.ಕೃಷ್ಣಕುಮಾರ್, ಶಿವಗಿರಿ ಕ್ಷೇತ್ರದ ಅನ್ನದಾನೇಶ್ವರನಾಥ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.