ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭಜನೆಯ ರಾದ್ಧಾಂತ: ಕಾಂಗ್ರೆಸ್‌ಗೆ ‘ಶಾಪ’

Last Updated 1 ಮೇ 2014, 19:30 IST
ಅಕ್ಷರ ಗಾತ್ರ

ವಿಜಯವಾಡ (ಆಂಧ್ರಪ್ರದೇಶ): ಫಲ­ವತ್ತಾದ ಮಣ್ಣು, ಹೇರಳ ನೀರು, ಫಸಲಿನ ಸಮೃದ್ಧಿ ಇದ್ದರೂ ಕೃಷ್ಣಾ ಜಿಲ್ಲೆಯ ಜನರ ಮನದಲ್ಲಿ ಕೊರಗಿದೆ. ರಾಜ್ಯ ವಿಭಜನೆ ಕಾರಣಕ್ಕಾಗಿ ಉಂಟಾ­ಗಿರುವ ಈ ಕೊರಗು ಸಿಟ್ಟಾಗಿ ಪರಿ­ವರ್ತನೆ ಆಗಿದೆ. ಆ ಸಿಟ್ಟು ರಾಷ್ಟ್ರೀಯ ಪಕ್ಷಗಳ ವಿರುದ್ಧ ತಿರುಗಿದೆ.

ಚುನಾವಣೆ ವಿಷಯ ಪ್ರಸ್ತಾಪಿ­ಸು­ತ್ತಲೇ ‘ನೇರಾನೇರ ಸ್ಪರ್ಧೆ’ ಎನ್ನುತ್ತಾರೆ. ಯಾರ ನಡುವೆ ಎಂದು ಕೇಳುವ ಮೊದಲೇ ‘ತೆಲುಗುದೇಶಂ ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ ಮಧ್ಯೆ’ ಎಂದು ಅವರೇ ಪ್ರತಿ­ಕ್ರಿಯಿ­ಸುತ್ತಾರೆ. ಅಪ್ಪಿ­ತಪ್ಪಿಯೂ ಕಾಂಗ್ರೆಸ್‌ ಹೆಸರು ಪ್ರಸ್ತಾಪಿ­ಸು­ವುದಿಲ್ಲ. ಇದು ಉದ್ದೇಶ­­ಪೂರ್ವಕವೂ ಆಗಿರಬಹುದು. ಇಲ್ಲವೇ ಬೇಸರ­ದಿಂದಲೂ ಇರಬಹುದು. ನಾವಾಗಿಯೇ ಕೆದಕಿದರೂ ಉಪೇಕ್ಷೆಯ ಮುಖಭಾವ ತೋರುತ್ತಾರೆ.

‘ಖಾಲಿ ಕುಂಡಿಚ್ಚಿ ಚೇತುಲೆತ್ತಿಂದ ಕಾಂಗ್ರೆಸ್‌’ (ಖಾಲಿ ಕೊಡ ಕೊಟ್ಟು ಕೈಬಿಟ್ಟಿದೆ ಕಾಂಗ್ರೆಸ್‌) ಎಂದು ವಿಜಯ­ವಾಡ ನಿವಾಸಿ ವಾಸು ಆಕ್ರೋಶ ವ್ಯಕ್ತಪಡಿಸಿದರು. ‘ಮದ್ರಾಸ್‌ನಿಂದ ಕರ್ನೂಲು, ಕರ್ನೂ­ಲ್‌­­­ನಿಂದ ಹೈದರಾಬಾದ್‌, ಹೈದರಾ­ಬಾದ್‌ನಿಂದ ಎಲ್ಲಿಗೆ? ಸೀಮಾಂಧ್ರ ಜನರ ರಾಜಧಾನಿ ಕತೆ ಊರೂರು ತಿರುಗುವ ಸಂಚಾರಿ ಟೆಂಟ್‌­ಗಿಂತ ಕಡೆಯಾಗಿದೆ’ ಎಂದು ಗುಡಿವಾಡ ಪಟ್ಟಣದ ಜೋಗಯ್ಯ ಶಾಸ್ತ್ರಿ ವ್ಯಥೆಪಟ್ಟರು.

ಕಾಂಗ್ರೆಸ್‌ಗೆ ‘ಶಾಪ’: ವಿಭಜನೆ ಬಗ್ಗೆ ಅನೇಕರಿಗೆ ತಕರಾರಿಲ್ಲ. ‘ಈ ರಾದ್ಧಾಂತ ಹೇಗೋ ಇತ್ಯರ್ಥ­ವಾಗಿದೆ. ಇನ್ನಾದರೂ ನೆಮ್ಮದಿಯಿಂದ ಇರಬಹುದು’ ಎಂದು ಕೆಲವರು ಪ್ರತಿಕ್ರಿಯಿಸುತ್ತಾರೆ. ಆದರೆ, ವಿಭ­ಜಿಸಿದ ರೀತಿ ಕುರಿತು ತೀವ್ರ ಅಸ­ಮಾಧಾನ ಇದೆ. ಸೀಮಾಂಧ್ರಕ್ಕೆ ರಾಜ­ಧಾನಿ ಸ್ಥಳವನ್ನೂ ಗುರುತಿಸದೆ ತರಾ­ತುರಿ­ಯಲ್ಲಿ ತೀರ್ಮಾನ ಕೈಗೊಳ್ಳುವ ಅಗತ್ಯ ಇತ್ತೇ ಎಂದು ಪ್ರಶ್ನಿಸುತ್ತಾರೆ. ಈ ಅಸಮಾಧಾನ ಈಗಿನ ಚುನಾವಣೆ­ಯಲ್ಲಿ ಕಾಂಗ್ರೆಸ್‌ಗೆ ‘ಶಾಪ’ವಾಗಿ ಪರಿ­ಣಮಿಸುವ ಸ್ಪಷ್ಟ ಸೂಚನೆಗಳು ಗೋಚರಿಸುತ್ತವೆ.

1953ರವರೆಗೂ ಈಗಿನ ಸೀಮಾಂಧ್ರ ಪ್ರಾಂತ್ಯ ಅಖಂಡ ಮದ್ರಾಸ್ ರಾಜ್ಯದ ಭಾಗವಾಗಿತ್ತು. ಅದರ ರಾಜಧಾನಿಯೂ ಮದ್ರಾಸ್‌ ಆಗಿತ್ತು. 1953ರಲ್ಲಿ ಸೀಮಾಂ­ಧ್ರ ಅಲ್ಲಿಂದ ಪ್ರತ್ಯೇಕಗೊಂಡಾಗ ರಾಯಲ­ಸೀಮದ ಕರ್ನೂಲು ರಾಜ­ಧಾನಿ­ಯಾ­ಯಿತು. 1956ರಲ್ಲಿ ಸೀಮಾಂಧ್ರ­­­ದೊಂದಿಗೆ ತೆಲಂಗಾಣ ಸೇರಿ­ಕೊಂಡ ಕಾರಣ ರಾಜಧಾನಿ ಹೈದರಾ­ಬಾದ್‌ಗೆ ಸ್ಥಳಾಂತರಗೊಂಡಿತು. ವಿಭಜ­ನೆ­­ಯಿಂ­ದಾಗಿ ಹೈದರಾಬಾದ್‌ ತೆಲಂಗಾ­ಣಕ್ಕೆ ಸೇರಲಿದೆ. ಸೀಮಾಂಧ್ರ ರಾಜ­ಧಾನಿಗೆ ಸ್ಥಳ ಗುರುತಿಸಲು ಹುಡುಕಾಟ ನಡೆದಿದೆ.

ಕೃಷ್ಣನ್‌ ಸಮಿತಿ ರಚನೆ: ಸ್ಥಳ ಗುರು­ತಿ­ಸಲು ನಿವೃತ್ತ ಐ.ಎ.ಎಸ್‌. ಅಧಿಕಾರಿ ಶಿವ­ರಾಮ ಕೃಷ್ಣನ್‌ ನೇತೃತ್ವದಲ್ಲಿ ಸಮಿತಿ ರಚನೆ­­ಯಾಗಿದೆ. ಆ ಸಮಿತಿ ಈಚೆಗೆ ವಿಜ­ಯ­ವಾಡಕ್ಕೂ ಬಂದು ಪರಿಶೀಲಿ­ಸಿದೆ. ವಿಜಯವಾಡ–ಗುಂಟೂರು ಮಧ್ಯೆ ರಾಜ­ಧಾನಿ ನಿರ್ಮಿಸುವುದು ಸೂಕ್ತ ಎಂಬ ಮಾತು ಕೇಳಿಬಂದಿರುವ ಕಾರಣ ಈ ಭಾಗದ ಜನರಲ್ಲೂ ಆಸಕ್ತಿ ಕೆರಳಿದೆ. ಈ ನಿರೀಕ್ಷೆಯಿಂದಲೇ ಈ ಭಾಗದಲ್ಲಿ ಭೂಮಿ ಖರೀದಿ ವ್ಯವಹಾರ ಜೋರು ಪಡೆದಿದೆಯಂತೆ.

ಹೊಸ ರಾಜಧಾನಿ: ರಾಜಧಾನಿ­ಯಾ­ಗಲು ಅರ್ಹತೆ ಹೊಂದಿದ ನಗರಗಳಲ್ಲಿ ಕೃಷ್ಣಾ ಜಿಲ್ಲೆಯ ಪ್ರಮುಖ ವಾಣಿಜ್ಯ ನಗರಿ ವಿಜಯವಾಡ ಕೂಡ ಒಂದು. ದೇಶದ ಎರಡನೇ ಅತಿದೊಡ್ಡ ರೈಲ್ವೆ ಜಂಕ್ಷನ್‌ ಇಲ್ಲಿದ್ದು, ದೇಶದ ನಾಲ್ಕೂ ದಿಕ್ಕುಗಳಿಗೆ ರೈಲು ಸಂಪರ್ಕ ಕಲ್ಪಿಸಿದೆ. ಪ್ರತಿದಿನ 375ಕ್ಕೂ ಹೆಚ್ಚು ರೈಲುಗಳು ಬಂದುಹೋಗುತ್ತವೆ. ಬೃಹತ್‌ ಬಸ್‌ ನಿಲ್ದಾಣ ಇದೆ. ನಗರದಿಂದ 16 ಕಿ.ಮೀ. ದೂರದ ಗನ್ನವರಂ ಬಳಿ ವಿಮಾನ ನಿಲ್ದಾಣ ಇದೆ. ನೀರಿನ ದಾಹ ತೀರಿಸಲು ಕೃಷ್ಣಾ ನದಿ ಬೆನ್ನಿಗಿದೆ. ಇದಕ್ಕೆ ತಾಕಿ­ಕೊಂಡೇ ಗುಂಟೂರು ಜಿಲ್ಲೆ ಇದೆ. ಗುಂಟೂರಿ­ನಿಂದ 17 ಕಿ.ಮೀ. ಹಾಗೂ ವಿಜಯ­ವಾಡದಿಂದ 20 ಕಿ.ಮೀ. ಅಂತರದಲ್ಲಿ ನಾಗಾರ್ಜುನ ವಿಶ್ವ­ವಿದ್ಯಾಲ­­ಯದ ಕ್ಯಾಂಪಸ್‌ ಇದೆ. ಹೊಸ ರಾಜಧಾನಿಗೆ ಈ ಜಾಗ ಪರಿಗಣಿಸುವ ಸಾಧ್ಯತೆಗಳಿವೆ ಅಂತ ಗುಲ್ಲು ಹಬ್ಬಿದೆ.

ಕೃಷ್ಣಾ ಜಿಲ್ಲೆಯ ಪರಿಧಿಯಲ್ಲಿ ಎರಡು ಲೋಕಸಭಾ ಕ್ಷೇತ್ರ ಹಾಗೂ 16 ವಿಧಾನಸಭಾ ಕ್ಷೇತ್ರಗಳಿವೆ. ವಿಜಯ­ವಾಡ ನಗರದಲ್ಲಿನ ಮೂರು ಕ್ಷೇತ್ರ­ಗಳಲ್ಲಿ ಟಿಡಿಪಿಯು ಒಂದನ್ನು ಬಿಜೆಪಿಗೆ ಬಿಟ್ಟುಕೊಟ್ಟಿದೆ.  ತೆಲಂಗಾಣ ಜಿಲ್ಲೆ­ಗಳಲ್ಲಿ ಬಹುಮುಖ ಸ್ಪರ್ಧೆಯಿಂದ ಮತ­ದಾರ­ರಲ್ಲಿ ಗೊಂದಲ ಮೂಡಿತ್ತು. ಅಂತಹ ಗೊಂದಲ ಇಲ್ಲಿ ಇಲ್ಲ. ಎರಡು ಪ್ರಾದೇಶಿಕ ಪಕ್ಷಗಳ ನಡುವೆ ಆಯ್ಕೆ ಎಂದು ಜನರು ತೀರ್ಮಾನಿಸಿಬಿಟ್ಟಂತಿದೆ. ಒಂದೆರಡು ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಇರುವುದು ಬಿಟ್ಟರೆ ಉಳಿದ ಕಡೆ ಟಿಡಿಪಿ, ವೈಎಸ್‌ಆರ್‌ ಕಾಂಗ್ರೆಸ್ ನಡುವೆ ನೇರ ಮತ್ತು ಸಮಬಲದ ಸ್ಪರ್ಧೆ ಇದೆ.

‘ಪೆಪ್ಪರ್‌ ಸ್ಪ್ರೇ’ ಲಗಡಪಾಟಿ ಕಣದಿಂದ ಹಿಂದೆ: ವಿಜಯವಾಡ ಲೋಕಸಭಾ ಕ್ಷೇತ್ರ­ವನ್ನು ಸತತ ಎರಡು ಬಾರಿ ಪ್ರತಿ­ನಿಧಿಸಿದ ಲಗಡಪಾಟಿ ರಾಜಗೋಪಾಲ್‌ ಈ ಸಲ ಕಣದಿಂದ ಹಿಂದೆ ಸರಿದಿದ್ದಾರೆ. ವಿಭಜನೆ ವಿರೋಧಿಸಿ ಲೋಕಸಭೆಯಲ್ಲಿ ನಡೆದ ಗದ್ದಲದಲ್ಲಿ ‘ಪೆಪ್ಪರ್‌ ಸ್ಪ್ರೇ’ ಬಳಸಿ ಛೀಮಾರಿ ಹಾಕಿಸಿಕೊಂಡ ಇವ­ರನ್ನು ಸ್ಥಳೀಯರು ಆ ಕಾರಣಕ್ಕೂ ಸ್ಮರಿ­ಸು­ತ್ತಿಲ್ಲ. ಅಭಿವೃದ್ಧಿ ಕಾರ್ಯಗಳ ನೆಲೆ­ಯಲ್ಲೂ ನೆನೆಯುತ್ತಿಲ್ಲ. ವಿಜಯವಾಡದಿಂದ ಈ ಬಾರಿ ಟಿಡಿಪಿ­ಯಿಂದ ಕೇಶಿನೇನಿ ನಾನಿ, ವೈಎಸ್ಆರ್ ಕಾಂಗ್ರೆಸ್‌ನಿಂದ ಕೋನೇರು ಪ್ರಸಾದ್‌, ಕಾಂಗ್ರೆಸ್‌ನಿಂದ ದೇವಿನೇನಿ ಅವಿನಾಶ್‌ ಸ್ಪರ್ಧಿಸಿದ್ದಾರೆ.

ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಏಳು ವಿಧಾನಸಭಾ ಕ್ಷೇತ್ರಗಳು ಒಳ­ಪಡುತ್ತವೆ. ಅದರಲ್ಲಿ ಮೂರು ವಿಜಯ­ವಾಡ ನಗರ ಪರಿಧಿಯಲ್ಲಿವೆ. ಸುಮಾರು ಶೇ 60ರಷ್ಟು ಮತಗಳು ನಗರದಲ್ಲೇ ಇರುವುದರಿಂದ ಎಲ್ಲ ಪಕ್ಷಗಳೂ ನಗರದ ಕಡೆಗೇ ಹೆಚ್ಚು ದೃಷ್ಟಿ ಹರಿಸಿವೆ.
ಉದ್ಯಮ, ವ್ಯಾಪಾರ ರಂಗದಲ್ಲಿ ವಿಜಯ ಪತಾಕೆ ಹಾರಿಸಿದ ದೊಡ್ಡ ಕುಳಗಳಿಗೇ ಪ್ರಮುಖ ಪಕ್ಷಗಳು ಟಿಕೆಟ್‌ ನೀಡಿವೆ. ಕೋನೇರು ಪ್ರಸಾದ್‌ ಉದ್ಯಮಿ. ಕೇಶಿನೇನಿ ನಾನಿ ಅವರು ಟ್ರಾವೆಲ್ಸ್‌್‌ ಕಂಪೆನಿ ಹೊಂದಿದ್ದಾರೆ. ಪ್ರಚಾರ ಜೋರು ಪಡೆದಿದೆ. ಕೃಷ್ಣಾ, ಗುಂಟೂರು, ಪ್ರಕಾಶಂ ಜಿಲ್ಲೆಗಳಲ್ಲಿ ಕಣದಲ್ಲಿ ಇರುವ ಕೆಲವು ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿ, ಅನಿವಾಸಿ ಭಾರತೀ­ಯರೂ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರಂತೆ.

ಕೃಷ್ಣಾ ಜಿಲ್ಲೆಯ ಪ್ರಧಾನ ಕಚೇರಿ­ಗಳು ಮಚಲಿಪಟ್ಟಣಂನಲ್ಲಿವೆ. ಈ ಭಾಗ­ದಲ್ಲಿ­ರುವ ಮತ್ಸ್ಯಕಾರರ ಮತಗಳಿಗೂ ಪಕ್ಷಗಳು ಬಲೆ ಬೀಸಿವೆ. ಜಿಲ್ಲೆಯಲ್ಲಿ ಆರು ಸಾವಿರಕ್ಕೂ ಹೆಚ್ಚು ಮತ್ಸ್ಯಕಾರ ಕುಟುಂಬಗಳಿವೆ ಎಂದು ಲೆಕ್ಕ ಇಟ್ಟಿವೆ ಪಕ್ಷಗಳು. ಪ್ರತಿವರ್ಷ ಏಪ್ರಿಲ್‌– ಮೇ ನಡು­ವಣ ಅವಧಿಯಲ್ಲಿ ಒಂದೂವರೆ ತಿಂಗಳು ಸಮುದ್ರ­ದಲ್ಲಿ ಮೀನು ಬೇಟೆ­ಯನ್ನು ನಿಷೇ­ಧಿ­ಸುವುದು ರೂಢಿ. ಈ ಸಂದರ್ಭ­ದಲ್ಲಿ ಕೆಲಸ ಅರಸಿ ಮತ್ಸ್ಯಕಾರ ಕುಟುಂಬ­ಗಳು ಬೇರೆ ಬೇರೆ ಪ್ರದೇಶ­ಗಳಿಗೆ ವಲಸೆ ಹೋಗುತ್ತವೆ. ಇವರ ವೋಟಿನ ಮೇಲೆ ಕಣ್ಣಿಟ್ಟಿರುವ ಪಕ್ಷಗಳು ‘ಎಲ್ಲಿಗೂ ಹೋಗ­ಬೇಡಿ. ನಿಮ್ಮ ಯೋಗಕ್ಷೇಮ ನೋಡಿ­ಕೊಳ್ಳು­ತ್ತೇವೆ’ ಎಂದು ವಚನ ನೀಡಿ, ಅವರನ್ನು ಇಲ್ಲೇ ಇರಿಸಿಕೊಂಡಿವೆ.

ಸುಶಿಕ್ಷಿತರ ಒಲವು ಟಿಡಿಪಿ ಕಡೆಗೆ: ಸುಶಿಕ್ಷಿತ ಮತದಾರರಲ್ಲಿ ತುಸು ಹೆಚ್ಚಿನ ಮಂದಿ ಟಿಡಿಪಿ ಕಡೆ ಒಲವು ತೋರು­ತ್ತಾರೆ. ನಾರಾ ಚಂದ್ರಬಾಬು ನಾಯ್ಡು ಅವರ ‘ಅನುಭವ ಮತ್ತು ಆಡಳಿತ ದಕ್ಷತೆ’, ವಿಭಜನಾನಂತರದ ಸೀಮಾಂಧ್ರ­ದ ಅಭಿವೃದ್ಧಿಗೆ ಅವಶ್ಯ ಎನ್ನುತ್ತಾರೆ. ಹೊಸ ರಾಜಧಾನಿ ನಿರ್ಮಿ­ಸಲು, ಉದ್ಯೋಗ ಅವಕಾಶ­ಗಳನ್ನು ಸೃಷ್ಟಿಸಲು ಅವರೇ ಸಮರ್ಥರು ಎಂದು ಪಕ್ಷದ ಕಟ್ಟಾ ಅಭಿಮಾನಿಗಳಂತೆ ಕೆಲವರು ವಾದಿಸುತ್ತಾರೆ.

ವೈ.ಎಸ್‌.ಜಗನ್ಮೋಹನ್‌ ರೆಡ್ಡಿ ಅವರಿಗೆ ಒಂದು ಸಲ ಅವಕಾಶ ನೀಡಬೇಕು ಎಂದು ಒಂದು ವರ್ಗದ ಜನರು ಪ್ರತಿಪಾದಿಸುತ್ತಾರೆ. ಇವರ ತಂದೆ ವೈ.ಎಸ್‌.ರಾಜಶೇಖರ ರೆಡ್ಡಿ ಅವರ ಆಡಳಿತ ಅವಧಿಯಲ್ಲಿ ಜಾರಿಗೆ ಬಂದ ರಾಜೀವ್‌ ಆರೋಗ್ಯಶ್ರೀ ಅಂತಹ ಜನಪರ ಕಾರ್ಯಕ್ರಮಗಳನ್ನು ಇವರ ನಿಷ್ಠರು ಸಮರ್ಥನೆಗೆ ಬಳಸುತ್ತಾರೆ. ಜಗನ್‌ ವಿರುದ್ಧ ಇರುವ ಅಕ್ರಮ ಆಸ್ತಿ ಸಂಪಾದನೆ ಕುರಿತ ಆರೋಪಗಳ ಬಗ್ಗೆ ಜನಸಾಮಾನ್ಯರಲ್ಲಿ ಹೆಚ್ಚಿನ ಸ್ಪಂದನ ಇಲ್ಲ. ಆದರೆ ವಿದ್ಯಾವಂತರಲ್ಲಿ ಸ್ವಲ್ಪ­ಮಟ್ಟಿಗೆ ಸಿಟ್ಟಿದೆ.

ಕೃಷ್ಣೆಯ ಕೃಪೆಯಿಂದ ಜಿಲ್ಲೆಯಲ್ಲಿ ಸಮೃದ್ಧಿ ಇದೆ. ಕೊಂಡಪಲ್ಲಿಯಲ್ಲಿ 1,760 ಮೆಗಾವಾಟ್‌ ಸಾಮರ್ಥ್ಯದ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ ಇದೆ. ಭತ್ತ, ಕಬ್ಬು ಪ್ರಮುಖ ಬೆಳೆಗಳು. ಸರಕು ಸಾಗಣೆ ಕ್ಷೇತ್ರದಲ್ಲಿ ವಿಜಯವಾಡ ಮುಂಚೂಣಿ ನಗರ. ಒಂದು ಕಾಲದಲ್ಲಿ ರೌಡಿ ಚಟುವ­ಟಿಕೆಗಳಿಂದ ಕುಖ್ಯಾತಿಯನ್ನೂ ಪಡೆ­ದಿತ್ತು. ತೆಲುಗು ಸಿನಿಮಾ ಕತೆಗಳಿಗೆ ಪ್ರೇರಣೆ ಕೂಡ ಆಗಿತ್ತು. ಆದರೆ ‘ಆ ಹಾವಳಿ ಈಗ ಇಲ್ಲ’ ಎಂದು ಆಗಿನ ‘ಸೆಟ್ಲ್‌ಮೆಂಟ್‌’ ದಂಧೆ­ಯನ್ನು ಕಣ್ಣಾರೆ ಕಂಡಿರುವ ಟ್ಯಾಕ್ಸಿ ಚಾಲಕ ಅಬ್ದುಲ್‌ ರೆಹಮಾನ್‌ ನಿಟ್ಟುಸಿರು ಬಿಟ್ಟರು.

‘ಸರಕು ಸಾಗಣೆ ಲಾರಿ­ಗಳು ನಗರದ ಹೊರಗೇ ಹೋಗಲು ಅನುವಾಗಿಸುವ ಬೈಪಾಸ್‌ ರಸ್ತೆ ವಿಜಯವಾಡಕ್ಕೆ ತುರ್ತು ಅಗತ್ಯ’ ಎಂದೂ ಅಭಿಪ್ರಾಯಪಟ್ಟರು. ಅಭಿವೃದ್ಧಿಯಲ್ಲಿ ಈ ಭಾಗದ­ಲ್ಲಿಯೂ ಅಸಮತೋಲನ ಇದೆ. ಗುಡಿ­ವಾಡ ಅಂತಹ ಪ್ರಮುಖ ತಾಲ್ಲೂಕು ಕೇಂದ್ರ­ಗಳು ನೈರ್ಮಲ್ಯ, ಮೂಲ ಸೌಕರ್ಯದ ಕೊರತೆ ಎದುರಿಸುತ್ತಿವೆ. ಕೆಲವೆಡೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲೂ ಆಗಿಲ್ಲ. ಸಂಪತ್ತು ಕೆಲವರಲ್ಲೇ ಕೇಂದ್ರೀಕೃತವಾ­ಗುತ್ತಿ­ರುವಂತೆ ಅಭಿವೃದ್ಧಿ ಕಾರ್ಯಗಳೂ ಕೆಲವೇ ನಗರಗಳಿಗೆ ಸೀಮಿತವಾಗುತ್ತಿ­ರುವುದು ವಿಪ­ರ್ಯಾ­ಸದ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT