ಆಲಂಕಾರು(ಉಪ್ಪಿನಂಗಡಿ): ಕಳೆದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಎಲ್ಲಾ ಸಮುದಾಯದ ಜನರ ಆಶೀರ್ವಾದ ಬಿಜೆಪಿಗೆ ದೊರೆತಿದೆ.ಯಡಿಯೂರಪ್ಪನವರನ್ನೇ ಮುಂದಿನ ಎರಡೂವರೆ ವರ್ಷ ಅವಧಿಗೆ ಮುಖ್ಯಮಂತ್ರಿಯನ್ನಾಗಿ ಮುಂದುವರಿಸಬೇಕು ಎನ್ನುವ ಸಂದೇಶವನ್ನು ಮತದಾರರು ನೀಡಿದ್ದಾರೆ.ಆದರೆ ವಿರೋಧ ಪಕ್ಷಗಳು ಮಾತ್ರ ರಾಜ್ಯದ ಅಭಿವೃದ್ಧಿಗೆ ಕಂಟಕಪ್ರಾಯವಾಗಿದ್ದಾರೆ ಎಂದು ದಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ ಹೇಳಿದರು.
ಆಲಂಕಾರು ಶ್ರೀ ದುರ್ಗಾಂಬ ಕಾಲೇಜಿನ ಕ್ರೀಡಾಂಗಣದಲ್ಲಿ ಆಲಂಕಾರು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಮಂಗಳವಾರ ನಡೆದ ಕಾರ್ಯಕರ್ತರ ಹಾಗೂ ಮತದಾರರ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು. ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಅಭಿವೃದ್ಧಿಯ ಚಿಂತನೆಯಿಂದಾಂಗಿ ರಾಜ್ಯದ ಜನತೆ ಮತ್ತೆ ಮತ್ತೆ ಬಿಜೆಪಿಯನ್ನು ಆಶೀರ್ವದಿಸುತ್ತಿದ್ದು, ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ವಿವಿಧ ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರು ಬಿಜೆಪಿಯತ್ತ ಬರುತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಿರ್ನಾಮವಾಗಲಿದೆ ಎಂದು ಹೇಳಿದರು.
ಸುಳ್ಯ ಶಾಸಕ ಅಂಗಾರ, ಬಿಜೆಪಿ ದಕ ಜಿಲ್ಲಾ ಕಾರ್ಯದರ್ಶಿ ಸಂಜೀವ ಮಠಂದೂರು ಮಾತನಾಡಿದರು. ನೆಲ್ಯಾಡಿ ಜಿಲ್ಲಾ ಪಂಚಾಯಿತಿ ಸದಸ್ಯ ಬಾಲಕೃಷ್ಣ ಸುವರ್ಣ, ಬೆಳ್ಳಾರೆ ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ತಿಮ್ಮಪ್ಪ ಗೌಡ, ಆಲಂಕಾರು ತಾಲ್ಲೂಕು ಪಂಚಾಯಿತಿ ಸದಸ್ಯರಾದ ದಯಾನಂದ ಗೌಡ, ರಾಮಕುಂಜದ ಆಶೋಕ್ ಹಲ್ಯಾರ ಅವರನ್ನು ಅಭಿನಂದಿಸಲಾಯಿತು. ಶಿರಾಡಿ ತಾಪಂ ಸದಸ್ಯೆ ಪುಲಸ್ಯ ರೈ, ಜಿಪಂ ಮಾಜಿ ಸದಸ್ಯ ಕೃಷ್ಣ ಶೆಟ್ಟಿ, ತೀರ್ಥರಾಮ, ಶಯನಾ ಜಯಾನಂದ, ಧರ್ಮಪಾಲ ರಾವ್, ಲಕ್ಷ್ಮಿನಾರಾಯಣ ರಾವ್ ಇದ್ದರು.