ದಾವಣಗೆರೆ: ಬಸವಾದಿ ಶರಣರು ಸ್ಥಾಪಿಸಿದ ಧರ್ಮಕ್ಕೆ ಕೇಂದ್ರ ಸರ್ಕಾರ ವಿಶೇಷ ಸ್ಥಾನಮಾನ ನೀಡಬೇಕು ಎಂದು ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ಜಯದೇವ ಗುರುಗಳ 55ನೇ ಸ್ಮರಣೋತ್ಸವ, `ಜಯದೇವಶ್ರೀ~ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತದ ಸಂವಿಧಾನ ದೇಶದ ಎಲ್ಲ ಜಾತಿ, ಸಮುದಾಯಗಳಿಗೆ ಸಮಾನ ಪ್ರಾತಿನಿಧ್ಯ, ವಿಶಿಷ್ಟವಾದ ಸ್ಥಾನಮಾನ ಕೊಟ್ಟಿದೆ. ಅಂತೆಯೇ, ಬಸವಾದಿ ಶರಣರು ಪ್ರತಿಪಾದಿಸಿದ ಮಾನವ ಪ್ರೀತಿಯ ಮೇಲೆ ಸ್ಥಾಪಿಸಿದ ಧರ್ಮಕ್ಕೆ ಕೇಂದ್ರ ಸರ್ಕಾರ ವಿಶಿಷ್ಟವಾದ ಸ್ಥಾನಮಾನ ನೀಡಬೇಕು. ಆ ಮೂಲಕ ಎಲ್ಲ ಜಾತಿ, ಸಮುದಾಯಗಳಿಗೂ ಪ್ರಾತಿನಿಧ್ಯ ಹಾಗೂ ಆದ್ಯತೆ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
`ಜಯದೇವಶ್ರೀ~ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೇಂದ್ರದ ಕಂಪೆನಿ ವ್ಯವಹಾರಗಳ ಸಚಿವ ಎಂ. ವೀರಪ್ಪ ಮೊಯಿಲಿ ಅವರು, ವೀರಶೈವ ಸ್ವತಂತ್ರ ಧರ್ಮ. ಬಸವಣ್ಣನವರ ವರ್ಚಸ್ಸನ್ನು ಬೇರೆ ಬೇರೆ ರೀತಿ ಬಳಸಿಕೊಳ್ಳಲಾಗುತ್ತಿದೆ. ಬಸವಣ್ಣನ ಸಂದೇಶ ವಿಶ್ವವ್ಯಾಪಿ ಪಸರಿಸುವಂತಾಗಬೇಕು. ಅದಕ್ಕಾಗಿ ದೆಹಲಿಯಲ್ಲಿ ರಾಷ್ಟ್ರೀಯ ಸಮ್ಮೇಳನ ನಡೆಸಿ ಎಂದು ಸಲಹೆ ಮಾಡಿದರು.
ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್, ವಿಚಾರವಾದಿ ಕೆ.ಎಸ್. ಭಗವಾನ್, ರಾಜ್ಯ ಮಾನವಹಕ್ಕು ಮಂಡಳಿ ಅಧ್ಯಕ್ಷ ಹಾಶಿಂಪೀರ್ ವಾಲೀಕಾರ್ ಅವರಿಗೆ ಇದೇ ಸಂದರ್ಭ ಶೂನ್ಯಪೀಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.