ಮಳವಳ್ಳಿ: ತಾಲ್ಲೂಕಿನ ಶಿವನಸ ಮುದ್ರಂನ ಬಳಿಯಿರುವ ಮಲಿಕ್ಯಾತನಹಳ್ಳಿಯಲ್ಲಿ ಸ್ನೇಹ ಮಿಲನಮಿತ್ರ ಬಳಗದವತಿಯಿಂದ ಕೃತಕ ಪರಿಸರವನ್ನು ಸೃಷ್ಠಿಸಿ ಒಂದು ಕೈಯಲ್ಲಿ ಗದೆ, ಒಂದು ಕೈಯಲ್ಲಿ ಬೆಟ್ಟವನ್ನು ಹಿಡಿದು ನಿಂತಿರುವ ಗಣಪತಿಯನ್ನು ಪ್ರತಿಷ್ಠಾಪಿಸಿ ಶುಕ್ರವಾರ ಪೂಜಾ ಕಾರ್ಯಕ್ರಮ ನಡೆಸಿ ವಿಸರ್ಜನೆ ಮಾಡಲಾಯಿತು.
ಗಣೇಶನನ್ನು ಪ್ರತಿಷ್ಠಾಪಿಸಲು ಪ್ಲಾಸ್ಟಿಕ್ ಕವರ್ನಿಂದ ನೀಲಾಕಾಶದಂತೆ ಮಂಟಪ ಮಾಡಿ, ಗಣೇಶನ ಮುಂಭಾಗ ಆನೆ, ಜಿಂಕೆಯ ಪ್ರತಿಮೆಗಳನ್ನು ಇರಿಸಲಾಗಿತ್ತು. ಸುತ್ತಲೂ ಗರಿಕೆ ಹಾಗೂ ಸಣ್ಣ ಸಣ್ಣ ಗಿಡಗಳನ್ನು ಇರಿಸಿ ಹಸಿರುಪರಿಸರದ ನಡುವೆ ಗಣೇಶನನ್ನು ಪ್ರತಿಷ್ಠಾಪಿಸಿದ್ದು ವಿಶೇಷವಾಗಿದ್ದು ಇದೇ ಕಳೆದ 12 ವರ್ಷಗಳಿಂದಲೂ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತಿದೆ.