ಮಂಗಳೂರು: ಇಲ್ಲಿನ `ಸಂಸ್ಕೃತ ಭಾರತಿ'ಯ ಹಿರಿಯ ಕಾರ್ಯಕರ್ತ ಡಾ.ಎಚ್. ಆರ್. ವಿಶ್ವಾಸ್ ಅವರನ್ನು 2013ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ವಿಶ್ವಾಸ್ ಅವರು ಬರೆದ `ಮಾರ್ಜಾಲಸ್ಯ ಮುಖಂ ದೃಷ್ಟಂ' ಎಂಬ ಸಣ್ಣ ನಾಟಕಗಳ ಸಂಗ್ರಹಕ್ಕೆ ಈ ಪುರಸ್ಕಾರ ಲಭಿಸಿದ್ದು, ರೂ. 50 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ. ನವೆಂಬರ್ 15ರಂದು ಪಣಜಿ ಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಎಸ್.ಎಲ್. ಭೈರಪ್ಪ ಅವರ `ಆವರಣ' ಕಾದಂಬರಿಯ ಸಂಸ್ಕೃತ ಅನುವಾದಕ್ಕಾಗಿ ವಿಶ್ವಾಸ್ ಅವರು 2010ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ ಗಳಿಸಿದ್ದರು. 15ಕ್ಕೂ ಅಧಿಕ ಸಂಸ್ಕೃತ ಕೃತಿಗಳನ್ನು ರಚಿಸಿರುವ ಅವರು, ಕನ್ನಡದಲ್ಲೂ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ.