ಮಾಗಡಿ: ತಾಲ್ಲೂಕಿನ ಸೋಲೂರು ಹೋಬಳಿ ವೀರಾಪುರದ ಕೆಂಪಯ್ಯ ಎಂಬುವರಿಗೆ ಸೇರಿದ 12 ಕುರಿಗಳು ಗುರುವಾರ ಮಧ್ಯಾಹ್ನ ವಿಷಪೂರಿತ ಕಾಯಿ ತಿಂದು ಮೃತಪಟ್ಟಿವೆ.
ಸ್ಥಳಕ್ಕೆ ಭೇಟಿ ನೀಡಿದ್ದ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಾಜಶೇಖರ್ ಕೆಂಪಯ್ಯ ಈ ಕುರಿತು ವಿವರಿಸಿ, ‘ಕುರಿಗಳು ಟಪಾಲ್ ಕಾಯಿ ತಿಂದದ್ದರಿಂದ ಅವುಗಳ ದೇಹದಲ್ಲಿ ಆರ್ಸೆನಿಕ್ ಪಾಯ್ಸನ್ ಹೈಡ್ರೋಸಾನಿಕ್ ವಿಷ ಬಿಡುಗಡೆಯಾಗಿ ಮೃತಪಟ್ಟಿವೆ’ ಎಂದರು.
ಗುಡೇಮಾರನಹಳ್ಳಿಯ ಪಶುವೈದ್ಯ ಶಾಲೆಯ ಡಾ.ಜ್ಯೋತಿ ಸ್ಥಳಕ್ಕೆ ಭೇಟಿ ನೀಡಿ ಕುರಿಗಳ ಶವಪರೀಕ್ಷೆ ನಡೆಸಿದರು.
ಸೋಲೂರು ಉಪ ತಹಶೀಲ್ದಾರ್ ಎನ್.ಶಿವಕುಮಾರ್ ಭೇಟಿ ನೀಡಿದ್ದರು.
ಮನವಿ: ಸಾಕಿದ ಕುರಿಗಳನ್ನು ಕಳೆದುಕೊಂಡಿರುವ ಕೆಂಪಯ್ಯ ಅವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಒದಗಿಸಬೇಕೆಂದು ವೀರಾಪುರ ಗೊಲ್ಲರಹಟ್ಟಿಯ ನಾಗರಾಜ್ ಮನವಿ ಮಾಡಿದ್ದಾರೆ.