ನಿಪ್ಪಾಣಿ: ಸಮೀಪದ ಸಿದ್ನಾಳ ಗ್ರಾಮದಲ್ಲಿಯ ವೇದಗಂಗಾ ನದಿಗೆ ಹೊಸದಾಗಿ ನಿರ್ಮಿಸಿರುವ ಕಿರು ಸೇತುವೆಯಿಂದಾಗಿ ಜನಜೀವನ ಸುಸೂತ್ರವಾಗಿ ನಡೆದಿದೆ. ಹಳೆ ಕಿರುಸೇತುವೆ ಶಿಥಿಲಗೊಂಡಿದ್ದರಿಂದ ಬಹಳ ವರ್ಷಗಳಿಂದ ಮಳೆಗಾಲದಲ್ಲಿ ಪ್ರತಿವರ್ಷ ಸುಮಾರು ಒಂದು ತಿಂಗಳಕ್ಕೂ ಮೇಲ್ಪಟ್ಟು ಅಕ್ಕೋಳ-ಸಿದ್ನಾಳ ಮಾರ್ಗ ಸೇರಿದಂತೆ ಅನೇಕ ಗ್ರಾಮಗಳ ಸಂಪರ್ಕ ಕಡಿತಗೊಳ್ಳುತ್ತಿತ್ತು. ಹಳೆ ಕಿರು ಸೇತುವೆಯು ನದಿಯ ನೀರಿನ ರಭಸಕ್ಕೆ ಕೊಚ್ಚಿ ಹೋದರೂ 4 ಅಡಿ ಎತ್ತರ ನಿರ್ಮಿಸಿದ ಹೊಸ ಸೇತುವೆಯಿಂದಾಗಿ ಯಾವುದೇ ಅಡೆತಡೆಯಿಲ್ಲದೇ ಸಂಚಾರ ಸರಾಗವಾಗಿ ನಡೆದಿದೆ.
ಅಕ್ಕೋಳ, ಗಳತಗಾ ಮುಂತಾದ ಹತ್ತಾರು ಗ್ರಾಮದ ನಿವಾಸಿಗಳು ನೆರೆ ರಾಜ್ಯದ ಎಂಐಡಿಸಿಗೆ ಇದೇ ಸೇತುವೆಯ ಮೇಲಿಂದ ಹೋಗಬೇಕಾಗುತ್ತಿತ್ತು. ಅವರ ಗೋಳು ಮುಗಿದಂತಾಗಿದೆ. ಹೊಸ ಸೇತುವೆಯಲ್ಲಿ ನೀರಿನ ಶೇಖರಣೆ ಪ್ರಮಾಣ ಹೆಚ್ಚಾಗಿದ್ದರಿಂದ ರೈತರಲ್ಲಿ ಸಂತಸದ ಕಳೆ ತುಂಬಿದೆ.