ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನ - ನುಡಿ ಜಾತ್ರೆ ಯಶಸ್ವಿಯಾಗಿ ಮುಗಿದಿದೆ. ಲಕ್ಷಾಂತರ ಜನ ಭಾಗವಹಿಸಿ, ಕನ್ನಡ ಸಂಭ್ರಮವನ್ನು ಹೆಚ್ಚಿಸಿದ್ದಾರೆ. 5 ಕೋಟಿ ರೂಪಾಯಿಗಳಿಗೂ ಮಿಕ್ಕಿದ ಕನ್ನಡ ಪುಸ್ತಕಗಳು ಮಾರಾಟವಾಗಿವೆ.
ಕನ್ನಡ ಸಾಹಿತ್ಯದ ಪ್ರಗತಿಯ ದೃಷ್ಟಿಯಿಂದ ಇಷ್ಟು ಸಾಕೆ? ಕಥೆ, ಕಾದಂಬರಿ, ಕಾವ್ಯ, ನಾಟಕಗಳಷ್ಟೇ ಸಾಹಿತ್ಯವಲ್ಲ. ಇಂದು ಕನ್ನಡಕ್ಕೆ ವೈದ್ಯಶಾಸ್ತ್ರವೂ ಸೇರಿದಂತೆ ವಿಜ್ಞಾನದ ನಾನಾ ಶಾಖೆಗಳ ಮಾಹಿತಿ ಬರಬೇಕಾಗಿದೆ. ಒಂದು ಘೋಷ್ಠಿಯಲ್ಲಿ ‘ಕನ್ನಡ ಮತ್ತು ವಿಜ್ಞಾನ’ ಎಂಬ ವಿಷಯ ಮಂಡನೆಯನ್ನು ಬಿಟ್ಟರೆ, ವೈದ್ಯ ಸಾಹಿತ್ಯವನ್ನು ವಿಜ್ಞಾನ ಸಾಹಿತ್ಯವನ್ನು ಕ.ಸಾ.ಪ. ಗಣನೆಗೇ ತೆಗೆದುಕೊಂಡಿಲ್ಲ. ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ಅದರ ಪ್ರಸ್ತಾಪವಿಲ್ಲ. ವೈದ್ಯ ವಿಜ್ಞಾನ ಪುಸ್ತಕಗಳು ಪ್ರತಿ ವರ್ಷ ಲಕ್ಷ ಲಕ್ಷ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ.
ಇದುವರೆಗೆ 2000ಕ್ಕೂ ಹೆಚ್ಚಿನ ವೈದ್ಯ ಸಾಹಿತ್ಯ ಪುಸ್ತಕಗಳು ಪ್ರಕಟಗೊಂಡಿವೆ. ರೋಗಗಳ ಕಾರಣ, ಚಿಕಿತ್ಸೆ ಮತ್ತು ನಿವಾರಣೆಯಲ್ಲದೆ ಆರೋಗ್ಯ ವರ್ಧನೆಗೆ ಸಹಾಯವಾಗುವ ಆಧುನಿಕ ವೈದ್ಯ ಆವಿಷ್ಕಾರಗಳನ್ನು ಜನರಿಗೆ ತಿಳಿಸುವ ವೈದ್ಯ ಸಾಹಿತ್ಯಕ್ಕೆ ಕ.ಸಾ.ಪ. ಮನ್ನಣೆ ನೀಡಬೇಕಿತ್ತು.
ಈ ವಿಷಯದಲ್ಲಿ ಕ.ಸಾ.ಪ. ಅಧ್ಯಕ್ಷರಿಗೆ ನಾನೂ ಪತ್ರ ಬರೆದಿದ್ದೆ. ಕನ್ನಡ ವೈದ್ಯ ಸಾಹಿತ್ಯ ಪರಿಷತ್ತೂ ಮನವಿಯನ್ನು ಸಲ್ಲಿಸಿತ್ತು. ವಿಜ್ಞಾನದ ಇತರ ಪ್ರಾಕಾರಗಳಾದ ಕೃಷಿ, ವಿಜ್ಞಾನ, ತಂತ್ರಜ್ಞಾನ ಅಂತರಿಕ್ಷವಿಜ್ಞಾನ, ಸಾಗರ ವಿಜ್ಞಾನ ಜೀವಶಾಸ್ತ್ರ, ಕಂಪ್ಯೂಟರ್, ವಿದ್ಯುನ್ಮಾನ ವಿಜ್ಞಾನವನ್ನು ಜನರಿಗೆ ತಲುಪಿಸುತ್ತಿರುವ ಅನೇಕ ಸಾಹಿತಿಗಳಿದ್ದಾರೆ.
ಮುಂದಿನ ಸಮ್ಮೇಳನಗಳಲ್ಲಿ ಹಾಗೂ ಇತರ ವೇದಿಕೆಗಳಲ್ಲಿ ಕ.ಸಾ.ಪ. ವೈದ್ಯವಿಜ್ಞಾನ ಮತ್ತು ಇತರ ವಿಜ್ಞಾನ ಸಾಹಿತ್ಯಕ್ಕೆ ಸೂಕ್ತ ಗೌರವ ಮನ್ನಣೆಯನ್ನು ನೀಡಬೇಕೆಂದು ಒತ್ತಾಯಿಸುತ್ತೇನೆ.