ಹಾಸನ: `ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ಗಳು ಕೃಷಿ ಚಟುವಟಿಕೆಗಳಿಗೆ ದೀರ್ಘಾವಧಿಗೆ ಸಾಲ ನೀಡಲು ಅನುಕೂಲವಾಗುವ ಉದ್ದೇಶದಿಂದ ವೈದ್ಯನಾಥನ್ ಅವರದಿಯನ್ನು ಜಾರಿ ಮಾಡಬೇಕು~ ಎಂದು ಹಾಸನ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎನ್.ಸಿ. ನಾರಾಯಣಗೌಡ ಒತ್ತಾಯಿಸಿದ್ದಾರೆ.
ಹಾಸನ ಜಿಲ್ಲಾ ಸಹಕಾರ ಯೂನಿಯನ್, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಮತ್ತು ಸಹಕಾರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ಗಳ ಆಡಳಿತ ಮಂಡಳಿ ನಿರ್ದೇಶಕರು ಮತ್ತು ವ್ಯವಸ್ಥಾಪಕರುಗಳಿಗೆ ಈಚೆಗೆ ಹಾಸನದಲ್ಲಿ ಆಯೋಜಿಸಿದ್ದ ಸಹಕಾರ ನಾಯಕತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
~ಪಿಕಾರ್ಡ್ ಬ್ಯಾಂಕ್ಗಳು ಗ್ರಾಮೀಣ ರೈತರಿಗೆ ಕೃಷಿ ಚಟುವಟಿಕೆಗಳಿಗಾಗಿ ವಿವಿಧ ಸಾಲ ಯೋಜನೆಗಳನ್ನು ಜಾರಿ ಮಾಡಿವೆ. ಹಿಂದೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ಬ್ಯಾಂಕ್ಗಳು ವಿವಿಧ ಕಾರಣಗಳಿಂದ ಈಚಿನ ದಿನಳಲ್ಲಿ ನಷ್ಟ ಅನುಭವಿಸುವ ಹಂತಕ್ಕೆ ಬಂದಿವೆ. ರಾಜ್ಯದಲ್ಲಿ ಪಿಕಾರ್ಡ್ ಬ್ಯಾಂಕ್ಗಳು ಒಟ್ಟು 150 ರಿಂದ 200 ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿವೆ. ವೈದ್ಯನಾಥನ್ ವರದಿ ಜಾರಿ ಮಾಡಿದರೆ ಎಲ್ಲ ಪಿಕಾರ್ಡ್ ಬ್ಯಾಂಕ್ಗಳು ಮತ್ತೆ ಸಾಲ ನೀಡುವ ಅರ್ಹತೆ ಪಡೆದು ರೈತರಿಗೆ ಅನುಕೂಲ ಎಂದರು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಆರ್.ಟಿ. ದ್ಯಾವೇಗೌಡ, `ಪಿಕಾರ್ಡ್ ಬ್ಯಾಂಕ್ಗಳ ಆಡಳಿತ ಮಂಡಳಿಯವರು ರೈತರಿಗೆ ಬ್ಯಾಂಕ್ ನೀಡುವ ಸಾಲ ಸೌಲಭ್ಯಗಳ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಪ್ರಚಾರ ನಡೆಸಬೇಕು~ ಎಂದರು.
`ಪಿಕಾರ್ಡ್ ಬ್ಯಾಂಕ್ಗಳು ಸ್ವಂತ ಬಂಡವಾಳ ಹೆಚ್ಚಿಸಿಕೊಂಡು ಕೃಷಿಯೇತರ ಚಟುವಟಿಕೆಗಳಿಗೆ ಸಾಲ ನೀಡುವ ವ್ಯವಸ್ಥೆ ಮಾಡಬೇಕು. ಆ ಮೂಲಕ ಲಾಭದಾಯಕ ಯೋಜನೆ ರೂಪಿಸಬೇಕು~ ಎಂದು ನಬಾರ್ಡ್ ಬ್ಯಾಂಕ್ ನಿರ್ದೇಶಕ ಬಿ.ಎಸ್. ರಾಜಶೇಖರ್ ಸಲಹೆ ನೀಡಿದರು.
ಹಾಸನ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಸಿ. ರಾಜಣ್ಣ ಸಹಕಾರ ಕಾಯ್ದೆ, ಜಿಲ್ಲಾ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಉಪನಿರ್ದೇಶಕ ರವೀಂದ್ರ ಪಾಟೀಲ್ ಸಹಕಾರ ಸಂಘಗಳಲ್ಲಿ ಲೆಕ್ಕ ಪರಿಶೋಧನೆಯ ಮಗತ್ವದ ಬಗ್ಗೆ ಉಪನ್ಯಾಸ ನೀಡಿದರು.ಯೂನಿಯನ್ ಅಧ್ಯಕ್ಷ ಕಾರ್ಲೆ ಇಂದ್ರೇಶ್ ಅಧ್ಯಕ್ಷತೆ ವಹಿಸಿದ್ದರು.
ಯೂನಿಯನ್ ನಿರ್ದೇಶಕ ಎಚ್.ಬಿ. ಮಲ್ಲಪ್ಪ, ರಾಮಣ್ಣ, ವನಿತಾ ಮುಂತಾದವರು ಪಾಲ್ಗೊಂಡಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವಾಗತಿಸಿದರು. ವ್ಯವಸ್ಥಾಪಕ ಕೇಶವಪ್ರಸಾದ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.