ಕನಕಗಿರಿ: ಸರ್ಕಾರದಿಂದ ನೇಮಕವಾದ ವೈದ್ಯರು ಸೇವೆಗೆ ಹಾಜರಾಗುತ್ತಿಲ್ಲ, ಜಿಲ್ಲೆಗೆ 15 ಮಂದಿ ವೈದ್ಯರು ನೇಮಕಗೊಂಡಿದ್ದರೂ ಒಬ್ಬರೆ ಹಾಜರಾಗಿದ್ದಾರೆ ಹೀಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಉಂಟಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹಾದೇವಯ್ಯಸ್ವಾಮಿ ತಿಳಿಸಿದರು.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಎಂಬಿಬಿಎಸ್ ಪದವಿ ಪಡೆದ ವೈದ್ಯರು ಸೇರಿದಂತೆ ಆಸ್ಪತ್ರೆಗೆ ಇತರೆ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಸರ್ವ ಪಕ್ಷದ ಮುಖಂಡರು, ಜನಪ್ರತಿನಿಧಿಗಳು ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಜನತೆ, ರೋಗಿಗಳಿಗೆ ತೊಂದರೆ ಕೊಡುವ ಉದ್ದೇಶ ತಮಗಿಲ್ಲ, ಆಯಾ ಕ್ಷೇತ್ರದ ಆಸ್ಪತ್ರೆಗೆ ವೈದ್ಯರನ್ನು ನೇಮಿಸುವಂತೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಕೇಳುತ್ತಿದ್ದಾರೆ ಎಂದು ತಿಳಿಸಿದರು.ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜನಪರ ಹೋರಾಟಗಾರ ಮುಕುಂದರಾವ್ ಭವಾನಿಮಠ ಮಾತನಾಡಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಬಡ, ದುರ್ಬಲ ಜನಾಂಗದವರಿಗೆ ತೀರ ತೊಂದರೆ ಉಂಟಾಗಿದೆ, ಗರ್ಭಿಣಿ ಮಹಿಳೆಯರು ಹಾಗೂ ವಿವಿಧ ರೋಗಗಳಿಂದ ಬಳಲುತ್ತಿರುವವರ ಪಾಡು ದೇವರಿಗೆ ಗೊತ್ತು, ವೈದ್ಯರನ್ನು ನೇಮಕ ಮಾಡದಿದ್ದರೆ ಸಮುದಾಯ ಆರೋಗ್ಯ ಕೇಂದ್ರ ಏಕೆ ಬೇಕು, ಅದನ್ನು ಈಗ ಬೀಳುವ ಸ್ಥಿತಿಯಲ್ಲಿರುವ ಮೊರಾರ್ಜಿ ದೇಸಾಯಿ ಮಾದರಿಯ ವಸತಿ ಶಾಲೆಗೆ ಬಿಟ್ಟುಕೊಡುವಂತೆ ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಡಿಎಚ್ಒ ಅವರು ಈ ಅಧಿಕಾರ ನನಗೆ ಇಲ್ಲ, ಬುಧವಾರದೊಳಗೆ ಸೂಕ್ತ ವ್ಯವಸ್ಥೆ ಮಾಡಲಾಗುವದು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಗಂಗಣ್ಣ ಸಮಗಂಡಿ ಮಾತನಾಡಿ ಡಾ. ಸುಧಾ ಅವರ ವರ್ಗಾವಣೆಯನ್ನು ಅಧಿಕಾರಿಗಳು ಜನಪ್ರತಿನಿಧಿಗಳ ಗಮನಕ್ಕೆ ತರದೆ ಸರ್ವಾಧಿಕಾರಿಯಂತೆ ವರ್ತಿಸಿದ್ದಾರೆ ಎಂದು ದೂರಿದರು.
ಗ್ರಾಪಂ ಸದಸ್ಯರಾದ ಕೆ. ಎಚ್. ಕುಲಕರ್ಣಿ, ಶಿವಕುಮಾರ ಕೋರಿ, ನಿಂಗಪ್ಪ ಪೂಜಾರಿ, ಸಣ್ಣ ಕನಕಪ್ಪ, ಶರಣೆಗೌಡ, ಕೆ. ಸುಭಾಸ ಮಾತನಾಡಿ 32 ಗ್ರಾಮಗಳ ವಾಪ್ತಿಗೆ ಬರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಒಬ್ಬ ವೈದ್ಯರಿಲ್ಲ ಶವ ಪರೀಕ್ಷೆಗೆ ಬೇರೊಂದು ಊರಿನ ವೈದ್ಯರನ್ನು ಅವಲಂಬಿಸಿರುವುದು ದುರದುಷ್ಟಕರ ಎಂದರು. ಜು.11ರೊಳಗೆ ವೈದ್ಯರನ್ನು ನೇಮಕ ಮಾಡದಿದ್ದರೆ `ಕನಕಗಿರಿ ಬಂದ್~ ಮಾಡಿ ಹೋರಾಟ ನಡೆಸಲಾಗುವುದು ಎಂದು ಸರ್ವ ಪಕ್ಷದ ಮುಖಂಡರು ಎಚ್ಚರಿಕೆ ನೀಡಿದರು.
ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಬಸರಿಗಿಡದ, ಕೃಷಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಮೇಶರೆಡ್ಡಿ ಓಣಿಮನಿ, ಗ್ರಾಪಂ ಸದಸ್ಯರಾದ ನಾಗೇಶ ಬಡಿಗೇರ, ಹೊನ್ನುರುಸಾಬ ಉಪ್ಪು, ತಿಪ್ಪಣ್ಣ ಮಡಿವಾಳರ, ನಾಗಪ್ಪ ಹುಂಚ್ಯಾಳ, ಹಾಲಪ್ಪ ಭಜಂತ್ರಿ, ಶಾಮಲಿಸಾಬ, ನಾಗರಾಜ ಬೋಂದಾಡೆ ಸರ್ವ ಪಕ್ಷದ ಮುಖಂಡರಾದ ಮನೋಹರರೆಡ್ಡಿ ಬೇರ್ಗಿ, ವೆಂಕಟೇಶ ಕಂಪ್ಲಿ, ಸಂತೋಷ ಹಾದಿಮನಿ, ಪಂಪಾಪತಿ ಜಾಲಿಹಾಳ, ಮಂಜುನಾಥ ರೆಡ್ಡಿ ಸಿಂಧುವಾಳ, ಕೆ. ಪಂಪಾಪತಿ, ಕಪಲಿ ಸಿದ್ದಪ್ಪ, ಚಂದ್ರು ಬೇಕರಿ, ನೀಲಕಂಠ ಬಡಿಗೇರ, ಪಾಮಣ್ಣ ಚೆಲುವಾದಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.ಸಿಪಿಐ ರುದ್ರೇಶ ಉಜ್ಜನ್ಕೊಪ್ಪ. ಪಿಎಸ್ಐ ಎಚ್. ಬಿ. ನರಸಿಂಗಪ್ಪ ಬಿಗಿ ಬಂದೋಬಸ್ತ್ ಒದಗಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.