ಗೋಕಾಕ: ಪಟ್ಟಣದ ಕಾರ್ಮಿಕ ರಾಜ್ಯ ವಿಮಾ ಚಿಕಿತ್ಸಾಲಯದಲ್ಲಿ ಕಾಯಂ ವೈದ್ಯಾಧಿಕಾರಿಗಳ ನೇಮಕಕ್ಕೆ ಆಗ್ರಹಿಸಿ ಮತ್ತು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕುರಿತಾಗಿ ರಿದ್ದಿ-ಸಿದ್ದಿ ಕಾರ್ಮಿಕರ ಸಂಘವು ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಿದೆ.
ಕಳೆದ ನಾಲ್ಕೈದು ತಿಂಗಳಿಂದ ಇಎಸ್ಐ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳಿಲ್ಲದೇ ಕಾರ್ಮಿಕ ಕುಟುಂಬಗಳಿಗೆ ತೊಂದರೆಯಾಗುತ್ತಿದೆ. ವಾರಕ್ಕೊಮ್ಮೆ ಮಾತ್ರ ವೈದ್ಯಾಧಿಕಾರಿಗಳು ಬರುತ್ತಿದ್ದು ವಿಮಾ ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಮಾನ್ಯ ಕಾಯಿಲೆ ಗೆ ತುತ್ತಾದರು ದೂರದ ಬೆಳಗಾವಿ ವಿಮಾ ಆಸ್ಪತ್ರೆಗೆ ಶಿಫಾರಸ್ಸು ಮಾಡುತ್ತಾರೆ ಎಂದು ಮನವಿಯಲ್ಲಿ ಕಾರ್ಮಿಕ ಸಂಘ ತಿಳಿಸಿದೆ.
ಜಿಲ್ಲಾ ಆಸ್ಪತ್ರೆಯಲ್ಲಿಯೂ ಸಹ ತಜ್ಞ ವೈದ್ಯಾಧಿಕಾರಿಗಳು ಇಲ್ಲದೆ ಅ್ಲ್ಲಲಿಯೂ ಸಹ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಶಿಫಾರಸ್ಸು ಮಾಡುತ್ತಾರೆ. ಇದರಿಂದಾಗಿ ರೋಗಿಗಳು ಆಸ್ಪತ್ರೆಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆ.ಎಲ್.ಇ ಗೋಕಾಕ ಹಾಗೂ ಸ್ಥಳೀಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಲ್ಲಿ ವೈದ್ಯಕೀಯ ವೆಚ್ಚಗಳನ್ನು ಮರು ಪಾವತಿಸುವ ಸೌಲಭ್ಯವನ್ನು ನೀಡಬೇಕು. ಅವಧಿ ಮೀರಿದ ಔಷಧಿಗಳನ್ನು ನೀಡುವುದನ್ನು ನಿಲ್ಲಿಸಬೇಕು. ಅಲ್ಲದೇ ದಿನದ 24 ಗಂಟೆ ಕಾರ್ಯ ನಿರ್ವಹಿಸಿಬೇಕು.
ಪಟ್ಟಣದ ಇಎಸ್ಐ ಆಸ್ಪತ್ರೆಗೆ ವಿಮಾದಾರರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಕಾರ್ಮಿಕ ಸಚಿವರು ಕಾರ್ಮಿಕ ಕುಟುಂಬಗಳ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ರಿದ್ದಿ-ಸಿದ್ದಿ ಕಾರ್ಮಿಕರ ಸಂಘ ಮನವಿಯಲ್ಲಿ ಆಗ್ರಹಿಸಿದೆ.
ಸಂಘದ ಉಪಾಧ್ಯಕ್ಷ ಎಸ್. ಬಿ.ತುಪ್ಪದ, ಕಾರ್ಯದರ್ಶಿ ಎಸ್. ಎಸ್.ವಾಳವಿ, ಡಿ.ಆಯ್.ಮಠಪತಿ, ಎಸ್.ಆಯ್.ಸುಬಂಜಿ, ಎಸ್. ವೈ.ವಡರಟ್ಟಿ, ಕೆ.ಬಿ.ಶೇಲಾರ, ಆರ್.ಜಿ.ಕಲಕೇರಿ, ಪಿ.ಜಿ.ಕುರಬೇಟ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ.