ಬೆಂಗಳೂರು: ದ್ರಾಕ್ಷಿ ಬೆಳೆಗಾರರು ಮತ್ತು ವೈನ್ಪ್ರಿಯರಿಗೆ ದ್ರಾಕ್ಷಾರಸ ಕುರಿತು ಅರಿವು ಮೂಡಿಸುವ ಸಲುವಾಗಿ ವೈನ್ ಟೂರಿಸಂ ಆರಂಭಿಸಲಾಗುತ್ತಿದೆ ಎಂದು ಕರ್ನಾಟಕ ದ್ರಾಕ್ಷಾರಸ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಕೃಷ್ಣ ಹೇಳಿದರು.
ಕರ್ನಾಟಕ ದ್ರಾಕ್ಷಾರಸ ಮಂಡಳಿ ಗುರುವಾರ ಮಂಡಳಿಯ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡಿ, ‘ವೈನ್ ಉತ್ಪಾದನೆಯ ವಿವಿಧ ಹಂತಗಳನ್ನು ಪರಿಚಯಿಸುವ ಸಲುವಾಗಿ ಹೆರಿಟೇಜ್ ವೈನರಿಯು ಆರಂಭಿಸಿರುವ ವೈನ್ ಟೂರಿಸಂ ವರ್ಷದ ಎಲ್ಲಾ ದಿನಗಳಲ್ಲೂ ತೆರೆದಿರುತ್ತದೆ. ದ್ರಾಕ್ಷಿ ಬೆಳೆಗಾರರಿಗೆ ವೈನ್ ಉದ್ಯಮವನ್ನು ಪರಿಚಯಿಸುವುದರ ಮೂಲಕ ದ್ರಾಕ್ಷಿಯ ಮೌಲ್ಯವರ್ಧನೆಗೆ ಅವಕಾಶ ಮಾಡಿಕೊಡಲಾಗುತ್ತದೆ’ ಎಂದರು.
ತೋಟಗಾರಿಕಾ ಇಲಾಖೆ ನಿರ್ದೇಶಕ ಡಾ.ಡಿ.ಎಲ್.ಮಹೇಶ್ವರ್, ‘ರಾಷ್ಟ್ರದಲ್ಲಿಯೇ ಇದು ಮೊದಲನೇ ಪ್ರಯತ್ನ. ಡಿ. 21 ಮತ್ತು 22 ರಂದು ರಾಮನಗರದ ಹೆರಿಟೇಜ್ ವೈನರಿ ಯಲ್ಲಿ ಹಮ್ಮಿಕೊಂಡಿರುವ ದ್ರಾಕ್ಷಾರಸ ಉತ್ಸವದಲ್ಲಿ ವೈನ್ ಟೂರಿಸಂ ಅನ್ನು ಉದ್ಘಾಟಿಸಲಾಗುತ್ತದೆ. ಹಾಪ್ ಕಾಮ್ಸ್ ಮಳಿಗೆಗಳಲ್ಲಿ ವೈನ್ ಮಾರಾಟಕ್ಕೆ ಅವಕಾಶ ನೀಡುವ ಪ್ರಸ್ತಾವ ಸರ್ಕಾರದ ಮುಂದಿದೆ’ ಎಂದರು.
ಹೆರಿಟೇಜ್ ವೈನರಿಯ ವ್ಯವಸ್ಥಾಪಕ ನಿರ್ದೇಶಕ ಪಿ.ಎಲ್.ವಿ.ರೆಡ್ಡಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.