ಶಹಾಬಾದ: ಚಿತ್ತಾಪುರ ತಾಲ್ಲೂಕಿನ ಶಹಾಬಾದ ಪಟ್ಟಣ ಹಾಗೂ ನೆರೆಯ ಭಂಕೂರ ಗ್ರಾಮದಲ್ಲಿ ಅಡುಗೆ ಅನಿಲ ವಿತರಣೆ ಸಮಸ್ಯೆ ತಾರಕಕ್ಕೇರಿದ್ದು ಎರಡು ತಿಂಗಳಿಂದ ಅಸಮರ್ಪಕ ವಿತರಣೆ ಬಳಕೆದಾರರ ನಿದ್ದೆಗೆಡಿಸಿದೆ.
ಗಾಳಿ ಸುದ್ದಿ ನಂಬಿ ಸಾರ್ವಜನಿಕರು ಹಲವು ದಿನಗಳಿಂದ ರಸ್ತೆ ಬದಿಯಲ್ಲಿ ಹಗಲು, ರಾತ್ರಿ ಎನ್ನದೆ ಖಾಲಿ ಸಿಲಿಂಡರ್ಗಳನ್ನು ಇಟ್ಟು ಕಾಯುವ, ರಸ್ತೆ ಬದಿಯಲ್ಲೆ ಮಲಗುವ ದೃಶ್ಯ ಸಾಮಾನ್ಯವಾಗಿದೆ. ಕೆಲವರ ಸಿಲಿಂಡರ್ಗಳು ಕಳುವಾದ ಪ್ರಸಂಗಗಳೂ ನಡೆದಿದೆ.
ಈ ಮಧ್ಯೆ ಶಹಾಬಾದ ಪಟ್ಟಣದಲ್ಲಿ ಅಡುಗೆ ಅನಿಲ ಸಿಲಿಂಡರ್ಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಶಂಕೆ ಇದೆ. `ಸಿಲಿಂಡರ್ ಒಂದಕ್ಕೆ ಸುಮಾರು 1200 ರೂ ಹಣ ಪಡೆದು ನೀಡಲಾಗುತ್ತಿದೆ. ಬಹುತೇಕ ಸಿಲಿಂಡರ್ಗಳು ಹಣವಂತರ ಮತ್ತು ಹೋಟೆಲ್ಗಳ ಪಾಲಾಗುತ್ತಿವೆ.
ಈ ವಿಷಯ ಆಹಾರ ಮತ್ತು ನಾಗರೀಕ ಪೂರೈಕೆ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಯಾವುದೆ ಕ್ರಮ ತೆಗೆದುಕೊಳ್ಳುತ್ತಿಲ್ಲ~ ಎಂದು ಹೈದರಾಬಾದ ಕರ್ನಾಟಕ ಮುಸ್ಲಿಂ ಪೋರಂನ ಜಿಲ್ಲಾ ಸಂಚಾಲಕ ಫಜಲ್ ಪಟೇಲ ದೂರುತ್ತಾರೆ.
ಇದೆ ರೀತಿ ಶಹಾಬಾದ ಹೊರವಲಯದ ಭಂಕೂರ ಗ್ರಾಮದಲ್ಲೂ ವಿತರಣಾ ಸಮಸ್ಯೆ ಉಲ್ಬಣಗೊಂಡಿದೆ. ಸರಿ ಸುಮಾರು ಎರಡು ತಿಂಗಳ ನಂತರ ಸಿಲಿಂಡರ್ಗಳ ಪೂರೈಕೆದಾರರು ಮಂಗಳವಾರ ಗ್ರಾಮಕ್ಕೆ ಬಂದಿದ್ದು ಕೊನೆಗಳಿಗೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿ ಸಿಲಿಂಡರ್ ವಿತರಿಸುತ್ತಿದ್ದು ಗ್ರಾಮಸ್ಥರು ಪರದಾಡುವಂತಾಗಿದೆ.
ವಲಯ ಅಧಿಕಾರಿಗಳಿಗೆ ಅಸಮರ್ಪಕ ಪೂರೈಕೆ ಬಗ್ಗೆ ಮಾತನಾಡಿದರೆ, `ಸ್ಥಳೀಯ ಅಧಿಕಾರಿಗಳ ಬಳಿ ಮಾತನಾಡಿ~ ಎಂದು ಜಾರಿಕೊಳ್ಳುತ್ತಾರೆ. `ಸ್ಥಳೀಯ ಅಧಿಕಾರಿ `ಫೂನ್~ ಎತ್ತುವುದೆ ಇಲ್ಲ~ ಎಂಬುದು ಗ್ರಾಮದ ಈರಣ್ಣ ಕಾರ್ಗಿಲ್ ಅಸಮಧಾನ. ಅಡುಗೆ ಅನಿಲದ ಗಂಭೀರ ಸಮಸ್ಯೆ ಕುರಿತು ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿಯನ್ನು ~ಪ್ರಜಾವಾಣಿ~ ಸಂಪರ್ಕಿಸಿದಾಗ, `ಕೇಂದ್ರ ಸರ್ಕಾರದ ಅಧೀನದ ಅಡುಗೆ ಅನಿಲ ವಿತರಣೆಗೆ ಸಂಬಂಧಿಸಿದ ಅಧಿಕಾರಿ ಅಥವಾ ವಿತರಕರು ತಮ್ಮ ಮಾತಿಗೆ `ಕ್ಯಾರೆ~ ಎನ್ನುವುದಿಲ್ಲ ಎಂಬ ಉತ್ತರ ಬಂತು.