ಬೆಂಗಳೂರು: ವಿಲ್ಸನ್ಗಾರ್ಡನ್ ಸಮೀಪದ ಔಟ್ರೀಚ್ ಶಾಲೆ ಆವರಣದಲ್ಲಿ ಶಾಲಾ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದ ವಿದ್ಯಾರ್ಥಿ ಮನೀಷ್ನ ಕುಟುಂಬ ಸದಸ್ಯರು ಹಾಗೂ ಇತರೆ ವಿದ್ಯಾರ್ಥಿಗಳ ಪೋಷಕರು ಶಾಲೆಯ ಎದುರು ಗುರುವಾರ ಶವವಿಟ್ಟು ಪ್ರತಿಭಟನೆ ಮಾಡಿದರು.
ಬೌರಿಂಗ್ ಆಸ್ಪತ್ರೆಯಲ್ಲಿ ಬೆಳಿಗ್ಗೆ ಮನೀಷ್ನ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಪೋಷಕರಿಗೆ ಒಪ್ಪಿಸಲಾಯಿತು. ಬಳಿಕ ಪೋಷಕರು ಆಂಬುಲೆನ್ಸ್ನಲ್ಲಿ ಶಾಲೆಯ ಬಳಿಗೆ ಶವ ತೆಗೆದುಕೊಂಡು ಬಂದು ಪ್ರತಿಭಟನೆ ನಡೆಸಿದರು.
ಮನೀಷ್ ಸಾವಿಗೆ ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಘಟನೆಯ ಹಿನ್ನೆಲೆಯಲ್ಲಿ ಶಾಲೆಗೆ ಗುರುವಾರ ರಜೆ ಘೋಷಿಸಲಾಗಿತ್ತು.
‘ಮನೀಷ್ ಮತ್ತೆ ಬದುಕಿ ಬರುವುದಿಲ್ಲ. ಆದರೆ, ಈ ರೀತಿಯ ಘಟನೆಗಳು ಮರುಕಳಿಸದಂತೆ ಆಡಳಿತ ಮಂಡಳಿ ಎಚ್ಚರ ವಹಿಸಬೇಕು. ಇತರೆ ಶಾಲೆಗಳು ಸಹ ಮಕ್ಕಳ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಮನೀಷ್ನ ಚಿಕ್ಕಪ್ಪ ವೆಂಕಟೇಶ್ ಹೇಳಿದರು.
ಡಿಸಿಪಿ ಆದೇಶ: ಶಾಲಾ ವಾಹನಗಳನ್ನು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲೆಯ ಆವರಣದೊಳಗೆ ತೆಗೆದುಕೊಂಡು ಹೋಗದಂತೆ ನಗರದ ಪೂರ್ವ ಸಂಚಾರ ವಿಭಾಗದ ಡಿಸಿಪಿ ಎಂ.ಎನ್.ಬಾಬು ರಾಜೇಂದ್ರಪ್ರಸಾದ್ ಆದೇಶ ಹೊರಡಿಸಿದ್ದಾರೆ.
‘ಶಾಲಾ ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಆದೇಶ ಹೊರಡಿಸಲಾಗಿದೆ’ ಎಂದು ಬಾಬು ರಾಜೇಂದ್ರಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.
ಶಾಲೆಗಳ ಪ್ರವೇಶದ್ವಾರದಲ್ಲೇ ಮಕ್ಕಳನ್ನು ವಾಹನಕ್ಕೆ ಹತ್ತಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಆ ವಾಹನಗಳು ಶಾಲೆಯ ಆವರಣ ಅಥವಾ ಆಟದ ಮೈದಾನ ಪ್ರವೇಶಿಸಲು ಅವಕಾಶ ನೀಡಬಾರದು. ವಾಹನಗಳನ್ನು ಶಾಲೆಯ ಹೊರ ಭಾಗದಲ್ಲೇ ನಿಲ್ಲಿಸಲು ವ್ಯವಸ್ಥೆ ಮಾಡಬೇಕು ಎಂದು ಶಾಲೆಗಳ ಆಡಳಿತ ಮಂಡಳಿ ಸದಸ್ಯರಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಆಗಾಗ್ಗೆ ಶಾಲೆಗಳಿಗೆ ಭೇಟಿ ನೀಡಿ ಆಡಳಿತ ಮಂಡಳಿಯವರು ಮಕ್ಕಳ ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಎಸಿಪಿಗಳು ಹಾಗೂ ಇನ್ಸ್ಪೆಕ್ಟರ್ಗಳಿಗೆ ಆದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.