ತಾಳಿಕೋಟೆ: ಶಾಲೆಗೆ ಬೀಗ ಹಾಕುವುದಾಗಿ ಬೆದರಿಕೆ ಒಡ್ಡುವುದು ಒಳ್ಳೆಯ ಕ್ರಮವಲ್ಲ, ಅದನ್ನು ಹೇಳಿದರೆ ನಿಮ್ಮ ಬಾಯಿಗೆ ಬೀಗ ಹಾಕಬೇಕಾಗು ತ್ತದೆ ಎಂದು ಜಿಲ್ಲಾ ಪಂಚಾತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್ಚರಿಕೆ ನೀಡಿದ ಪ್ರಸಂಗ ಪಡೇಕನೂರಿ ನಲ್ಲಿ ಸೋಮವಾರ ನಡೆಯಿತು.
`ವಿಶ್ವ ಕೈ ತೊಳೆಯುವ ದಿನ~ ಆಚರಣೆ ಸಂದರ್ಭದಲ್ಲಿ ಗ್ರಾಮದ ವಿವಿಧ ಕುಂದು-ಕೊರತೆಗಳ ಕುರಿತು ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗುತ್ತಿ ಜಂಬುನಾಥ ಅವರಿಗೆ ಮನವಿ ಸಲ್ಲಿಸುವ ಮುನ್ನ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಸೋಮನಗೌಡ ಕೋಳೂರ ಮನವಿ ಓದಿ ಹೇಳಿದಾಗ ಜಂಬುನಾಥ ಈ ರೀತಿ ಎಚ್ಚರಿಸಿದರು.
ಶಾಲೆಗೆ ಬೀಗ ಹಾಕುವುದು ಸರಿಯಾದುದಲ್ಲ, ಅದನ್ನು ಮೊದಲು ತಿದ್ದಿಕೊಳ್ಳಿ ಎಂದು ಗುತ್ತಿ ಅವರು ಆಕ್ಷೇಪಿಸಿದಾಗ, ತಮ್ಮ ಮಾತನ್ನು ಹಿಂದಕ್ಕೆ ಪಡೆಯುವುದಾಗಿ ಕೋಳೂರ ತಿಳಿಸಿದರು ಅಲ್ಲದೇ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದಾಗ ಸಿಇಓ ಸೇರಿದಂತೆ ಸಭೆಯಲ್ಲಿದ್ದವರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.
ಗ್ರಾಮದ ಬಳಿ ನಿರ್ಮಿಸಿರುವ ಕೆರೆಯಲ್ಲಿ ನಿಲ್ಲುವ ನೀರಿನಿಂದ ಹಳ್ಳೂರ ಗ್ರಾಮ ವ್ಯಾಪ್ತಿಯಲ್ಲಿನ ಜಮೀನುಗಳಿಗೆ ಹೋಗುವ ರಸ್ತೆ ನೀರಲ್ಲಿ ಮುಳುಗಿದೆ. ಗ್ರಾಮದ ಹೆಚ್ಚಿನ ಜಮೀನುಗಳು ಅಲ್ಲಿದ್ದು, ಜಮೀನುಗಳಿಗೆ ಹೋಗಬೇಕಾದರೆ ಎದೆ ಮಟ್ಟದವರೆಗೆ ನೀರಿನಲ್ಲಿ ನಡೆದು ಹೋಗಬೇಕಾಗುತ್ತದೆ.
ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಮನವಿಯಲ್ಲಿ ಕೇಳಿಕೊಳ್ಳಲಾಗಿದೆ. ಇದಲ್ಲದೆ ಪಡೇಕನೂರ ಗ್ರಾಮದಿಂದ ಕೊಣ್ಣೂರ, ಹುಲಿಬೆಂಚಿ ರಸ್ತೆ, ವಡವಡಗಿ ಕೂಡು ರಸ್ತೆ, ಜಾಯವಾಡಗಿಗೆ ಹೋಗುವ ರಸ್ತೆ ದುರಸ್ತಿ ಮಾಡಿಸಬೇಕು. ಚರಂಡಿ ಹಾಗೂ ಮಹಿಳಾ ಶೌಚಾಲಯ ನಿರ್ಮಾಣ, ಸರ್ಕಾರಿ ಪ್ರೌಢಶಾಲೆ ಮಂಜೂರಿ, ವಾಲ್ಮಿಕಿ ಸಮಾಜಕ್ಕೆ ರುದ್ರಭೂಮಿ ಮಂಜೂರಿ ಮೊದಲಾದ ಬೇಡಿಕೆಗಳುಳ್ಳ ಮನವಿ ಸಲ್ಲಿಸಲಾಯಿತು.
ಕೈ ತೊಳೆವ ದಿನ
ಮಕ್ಕಳು ನಮ್ಮ ಬದುಕಿನ ಆಶಾಕಿರಣ, ಅವರಿಗೆ ಒಳ್ಳೆಯ ಆರೋಗ್ಯ, ಶಿಕ್ಷಣ ದೊರೆತು ಉತ್ತಮ ನಾಗರಿಕರಾಗಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಹೇಳಿದರು.
ಅವರು ಸಮೀಪದ ಪಡೇಕನೂರಿನಲ್ಲಿ ಸೋಮವಾರ ಜಿ.ಪಂ., ತಾ.ಪಂ., ಹಾಗೂ ಗ್ರಾ.ಪಂ. ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ `ವಿಶ್ವ ಕೈ ತೊಳೆ ಯುವ ದಿನಾಚರಣೆ~ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಆರೋಗ್ಯವಂತರಾಗಿರಲು ಅವರಿಗೆ ಸ್ವಚ್ಛತೆ ಕುರಿತು ಮಾಹಿತಿ ನೀಡಿ. ಅದು ಮನೆಯಿಂದಲೇ ಪ್ರಾರಂಭವಾಗಲಿ ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿಯ ಸಿಇಓ ಗುತ್ತಿ ಜಂಬುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿಗಳಾಗಿದ್ದ ಜಿ.ಪಂ. ಉಪಕಾರ್ಯದರ್ಶಿ ಅಮರೇಶ ನಾಯಕ ಮಾತನಾಡಿದರು.
ವೇದಿಕೆಯಲ್ಲಿ ಮುದ್ದೇಬಿಹಾಳ ತಾಲ್ಲೂಕಾ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್.ಆರ್. ಮಾಣಿಕ್ಯ, ಕಿರಿಯ ಸಿವಿಲ್ ನ್ಯಾಯಾಧೀಶ ಆನಂದ ಹೋಗಾಡೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಶ್ವನಾಥ ಗಲಗಲಿ, ತಹಶೀಲ್ದಾರ ಸೋಮಲಿಂಗ ಗೆಣ್ಣೂರ, ತಾ.ಪಂ. ಅಧ್ಯಕ್ಷೆ ಮಹಾದೇವಿ ಸುತಗುಂಡರ, ಗ್ರಾ.ಪಂ.ಅಧ್ಯಕ್ಷೆ ಗೂಡಮಾ ಮಕಾನದಾರ, ಉಪಾಧ್ಯಕ್ಷೆ ಮಾತಂಗಿ ಮಾದರ, ಸಿಟಿಓ ಬಸನಗೌಡ ಪಾಟೀಲ ಉಪಸ್ಥಿತರಿದ್ದರು.
ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಅಕ್ಕಮಹಾದೇವಿ ಹೊಕ್ರಾಣಿ ಸ್ವಾಗತಿಸಿದರು. ಪಿಡಿಓ ಪಿ.ಎಸ್. ಅಂಗಡಿ ನಿರ್ವಹಿಸಿದರು. ಡಾ.ಎಸ್.ಸಿ.ಚೌಧರಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.