ದಾವಣಗೆರೆ: ಗ್ರಾಮದ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಆರೋಪಿಸಿ ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಬಸವರಾಜ ನಾಯ್ಕ ಹಾಗೂ ಸಚಿವ ಎಸ್.ಎ. ರವೀಂದ್ರನಾಥ್ ವಿರುದ್ಧ ಶಾಗಲೆ ಗ್ರಾಮದ ಪರಿಶಿಷ್ಟ ಜನಾಂಗದ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆದಿದೆ.
ಗ್ರಾಮದಲ್ಲಿ ಮಂಗಳವಾರ ಹೈಮಾಸ್ಟ್ ದೀಪ ಉದ್ಘಾಟನೆ ಹಾಗೂ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ಸಮಾರಂಭದ ಸಂದರ್ಭದಲ್ಲೇ ಘಟನೆ ನಡೆದಿದೆ. ಶಾಸಕರು ಚುನಾವಣೆ ಸಂದರ್ಭ ಸಂಪೂರ್ಣ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಿಸುತ್ತೇನೆ. ಅದರ ಹೊರತಾಗಿ ತಾವು ಮುಖ ತೋರಿಸುವುದಿಲ್ಲ ಎಂದು ವಾಗ್ದಾನ ಮಾಡಿದ್ದರು. ಆದರೆ, ಊರಿನಲ್ಲಿ ಯಾವ ಅಭಿವೃದ್ಧಿಯೂ ನಡೆದಿಲ್ಲ. ಚುನಾವಣೆಯಲ್ಲಿ ಗೆದ್ದ ಬಳಿಕ ಇದೇ ಮೊದಲಬಾರಿಗೆ ಬರುತ್ತಿದ್ದಾರೆ ಎಂದು ದೂಷಿಸಿದರು.
ಶಾಸಕರು ಭಾಷಣಕ್ಕೆ ಎದ್ದು ನಿಂತ ಕೂಡಲೇ ಉಜ್ಜಿನಪ್ಪ ಎಂಬುವರು, ‘ನೀವು ಏನೂ ಮಾತಾಡೋದು ಬೇಡ. ಇಷ್ಟು ಕಾಲ ಎಲ್ಲಿ ಹೋಗಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ಅಷ್ಟರಲ್ಲಿ ಪೊಲೀಸರು ಅವರನ್ನು ಸ್ಥಳದಿಂದ ಎಳೆದುಕೊಂಡು ಹೋದರು. ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ಉಜ್ಜಿನಪ್ಪ ಅವರ ಕೆನ್ನೆಗೆ ಏಟು ಬಾರಿಸಿದರು, ಈ ಸಂದರ್ಭ ಜನರ ಗುಂಪಿನೊಳಗೆ ನೂಕಾಟ ತಳ್ಳಾಟ ನಡೆಯಿತು.
ಖಳನಾಯಕರು: ಘಟನೆಗೆ ಸಮಾರಂಭದಲ್ಲಿಯೇ ಪ್ರತಿಕ್ರಿಯಿಸಿದ ಸಚಿವ ಎಸ್.ಎ. ರವೀಂದ್ರನಾಥ್, ಇಂಥ ಗಲಾಟೆ, ಪ್ರತಿಭಟನೆಗಳು ನಮಗೆ ಮಾಮೂಲು. ಹಿಂದಿ ಸಿನಿಮಾದಲ್ಲಿ ಕೆಲವರು ಖಳನಾಯಕರು ಇರುತ್ತಾರೆ. ಅಂತೆಯೇ ಇಲ್ಲಿಯೂ ಇದ್ದಾರೆ. ನೋವು ವ್ಯಕ್ತಪಡಿಸುವ ವಿಧಾನವಿದು ಎಂದರು.
ಕೊನೆಗೂ ಅಸಹಾಯಕರಾದ ಆಕ್ರೋಶ ವ್ಯಕ್ತಪಡಿಸಿದ ಗುಂಪು ಪೊಲೀಸರ, ರಾಜಕಾರಣಿಗಳ ಬೆಂಬಲಿಗರ ಬೆದರಿಕೆಗೆ ಹೆದರಿ ಕರಗಿಹೋಯಿತು.