ಕೆಜಿಎಫ್: ನಗರ ಹೊರವಲಯದ ಯರನಾಗನಹಳ್ಳಿ–ಚೆನ್ನಪಲ್ಲಿ ನಡುವಿನ ರಸ್ತೆ ವಿಸ್ತರಣೆಗೆ ನೂರಾರು ತೆಂಗಿನ ಮರಗಳನ್ನು ರೈತರ ಅನುಮತಿ ಇಲ್ಲದೇ ಕಡಿದುಹಾಕಲಾಗಿದೆ. ರೈತರ ಜಮೀನಿನಲ್ಲಿ ಬೆಳೆದಿದ್ದ ತೆಂಗಿನ ಮರಗಳನ್ನು ಜೆಸಿಬಿ ತಂದು ಅಕ್ರಮವಾಗಿ ನಾಶ ಮಾಡಲಾಗಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಮಂಗಳವಾರ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಯರನಾಗನಹಳ್ಳಿ ಮತ್ತು ಚೆನ್ನಪಲ್ಲಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಎರಡೂ ಗ್ರಾಮಗಳ ನಡುವೆ ಜಟಾಪಟಿ ನಡೆಯುತ್ತಿತ್ತು. ಚೆನ್ನಪಲ್ಲಿ ಗ್ರಾಮಸ್ಥರು ಕೆಜಿಎಫ್ ನಗರಕ್ಕೆ ಬರಬೇಕಾದರೆ ಯರನಾಗನಹಳ್ಳಿ ಮೂಲಕ ಓಣಿಯಂತಹ ಸಣ್ಣ ರಸ್ತೆಯನ್ನು ಬಳಸಬೇಕಾಗಿತ್ತು. ಇಲ್ಲವೆ ಕಮ್ಮಸಂದ್ರದ ಮೂಲಕ ಸುತ್ತು ಬಳಸಿ ಕೆಜಿಎಫ್ ನಗರಕ್ಕೆ ಹೋಗಬೇಕಾಗಿತ್ತು. ಈ ಸಂಬಂಧ ಹಲವು ವರ್ಷಗಳಿಂದ ರಾಜಿ ಸೂತ್ರಗಳು ನಡೆದರೂ ಪ್ರಯೋಜನವಾಗಿರಲಿಲ್ಲ.
ಹೀಗಿರುವಾಗ, ಸೋಮವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕಿ ವೈ.ರಾಮಕ್ಕ, ಮಾಜಿ ಶಾಸಕ ವೈ.ಸಂಪಂಗಿ ಚೆನ್ನಪಲ್ಲಿಯಿಂದ ಯರನಾಗನಹಳ್ಳಿಗೆ ರಸ್ತೆ ವಿಸ್ತರಣೆ ಮಾಡಲು ಸೂಚನೆ ನೀಡಿದರು. ಸ್ಥಳದಲ್ಲಿದ್ದ ಜೆಸಿಬಿ ಯಂತ್ರಗಳು ರಸ್ತೆಯ ಇಕ್ಕೆಲಗಳಲ್ಲಿ ಹಳ್ಳ ತೋಡಿ ರಸ್ತೆಯ ಗುರುತು ಹಾಕಿದವು. ಈ ಹಂತದಲ್ಲಿ ರೈತ ವೆಂಕಟೇಶ, ಮಾಜಿ ಶಾಸಕರ ನಡುವೆ ವಾಗ್ವಾದ ನಡೆಯಿತು.
ಮಂಗಳವಾರ ಬೆಳಿಗ್ಗೆ ರಸ್ತೆ ವಿಸ್ತರಣೆ ಕಾರ್ಯಾಚರಣೆ ಮುಂದುವರಿದಾಗ ಯರನಾಗನಹಳ್ಳಿ ನಿವಾಸಿಗಳು ಪ್ರತಿಭಟನೆ ನಡೆಸಿದರು. ಕಾಮಗಾರಿಗೆ ಅಡ್ಡಿಪಡಿಸಿದರು. ಯಾವ ಯೋಜನೆಯಲ್ಲಿ ಕಾಮಗಾರಿ ನಡೆಯುತ್ತಿದೆ ಎಂಬುದಕ್ಕೆ ಪುರಾವೆ ಇಲ್ಲ. ಕಾಮಗಾರಿಗಳನ್ನು ಇಲಾಖೆ ವತಿಯಿಂದ ಮಾಡಿಸದೇ ಶಾಸಕರು ಮತ್ತು ಅವರ ಹಿಂಬಾಲಕರು ಮಾಡಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಕಾಮಗಾರಿ ನಿಲ್ಲಿಸಿದರು.
ಸ್ಥಳದಲ್ಲಿ ಜಮಾಯಿಸಿದ ಎರಡೂ ಗ್ರಾಮಗಳ ನಿವಾಸಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಯರನಾಗನಹಳ್ಳಿ ನಿವಾಸಿಗಳು ಶಾಸಕಿ ಮತ್ತು ಮಾಜಿ ಶಾಸಕರ ವಿರುದ್ಧ ರಾಬರ್ಟಸನ್ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.