ಬೆಂಗಳೂರು: `ನಾಯಕ ಜನಾಂಗದವರು ಶೈಕ್ಷಣಿಕ ಮತ್ತು ರಾಜಕೀಯವಾಗಿ ಸಧೃಡಗೊಂಡಾಗ ಮಾತ್ರ ಸಮಾಜದಲ್ಲಿ ಸಬಲರಾಗಿ ಬದಕಲು ಸಾಧ್ಯವಿದೆ~ ಎಂದು ಯದ್ದಲದೊಡ್ಡಿ ಮಠದ ವಾಲ್ಮೀಕಿ ಸಂಜಯ ಕುಮಾರಸ್ವಾಮೀಜಿ ಅಭಿಪ್ರಾಯಪಟ್ಟರು.
ದರ್ಪಣ ಕಲಾವಿದರು ಸಂಸ್ಥೆಯು ನಗರದಲ್ಲಿ ಸೋಮವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ನಾಟಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ನಾಯಕ ಜನಾಂಗದ ಪ್ರಾಮಾಣಿಕತೆಯನ್ನು `ಸಾಕ್ಷಿ ಕಲ್ಲು~ನಾಟಕವು ಎಳೆ ಎಳೆಯಾಗಿ ತೆರೆದಿಡುತ್ತದೆ. ಸಾಮಾಜಿಕ ಸಂದೇಶವುಳ್ಳ ನಾಟಕಗಳು ಹೆಚ್ಚು ಪ್ರಯೋಗಗೊಳ್ಳಬೇಕು. ಈ ನಿಟ್ಟಿನಲ್ಲಿ ದರ್ಪಣ ಕಲಾವಿದರು ಕಾರ್ಯಪ್ರವೃತ್ತರಾಗಬೇಕು~ ಎಂದರು.
`ದಲಿತ ವರ್ಗದ ನಾಯಕರ ಕುರಿತು ಹೆಚ್ಚಿನ ನಾಟಕಗಳು ರಚನೆಗೊಳ್ಳಬೇಕು. ಸಾಂಸ್ಕೃತಿಕವಾಗಿಯೂ ನಾಯಕ ಜನಾಂಗದ ಇನ್ನಷ್ಟು ಬಲಗೊಳ್ಳಬೇಕಿದೆ~ ಎಂದು ಹೇಳಿದರು.
ಕರ್ನಾಟಕ ಮದಕರಿನಾಯಕ ಸೇನೆಯ ಅಧ್ಯಕ್ಷ ಸಿಂಗಾಪುರ ವೆಂಕಟೇಶ್, `ರಾಜ್ಯದಲ್ಲಿ ವಿವಿಧ ಹೆಸರಿನಲ್ಲಿ ಹಂಚಿಹೋಗಿರುವ ನಾಯಕ ಜನಾಂಗವು ಸಂಘಟಿತರಾಗಬೇಕು. ಆ ಮೂಲಕ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಪಡೆಯಲು ಸಾಧ್ಯವಿದೆ~ ಎಂದು ಹೇಳಿದರು.
ಹಿರಿಯ ನೋಂದಣಾಧಿಕಾರಿ ಕೆ.ರಾಮಚಂದ್ರ, ಸರ್ವಜನ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಅಲ್ಲೂರು ಶಿವರಾಜು, ರಂಗಭೂಮಿ ಕಲಾವಿದ ಡಿ.ಮುನಿರಾಜು ಅವರಿಗೆ `ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿ~ ಪ್ರದಾನ ಮಾಡಲಾಯಿತು. ಸಂಸ್ಥೆಯ ಅಧ್ಯಕ್ಷ ಕೆ.ಪಿ.ರವಿ, ಕಾರ್ಯದರ್ಶಿ ಬಿ.ಟಿ.ಮಂಜುನಾಥ್ ಇತರರು ಉಪಸ್ಥಿತರಿದ್ದರು.