ತುಮಕೂರು: ದೇಶ, ರಾಜ್ಯ ಆಳಿದವರೆಲ್ಲರೂ ಮತ್ತು ಈಗ ಆಳುತ್ತಿರುವವರು ದಲಿತರಿಗೆ, ಹಿಂದುಳಿದವರಿಗೆ ಸ್ವಾತಂತ್ರ್ಯ ಕೊಟ್ಟಿದ್ದೀವಿ, ಸಂಪತ್ತನ್ನು ಸಮಾನವಾಗಿ ಹಂಚಿದ್ದೀವಿ ಎಂದು ಹೇಳಿಕೊಂಡು ಬಂದಿದ್ದಾರೆ. ಆದರೆ, ಅವರಲ್ಲಿ ಯಾರೂ ಕೂಡ ದಲಿತರಿಗೆ ಹೆಣ್ಣು ಕೊಡಲಿಲ್ಲ, ದಲಿತರ ಮನೆಯಿಂದ ಹೆಣ್ಣು ತರಲಿಲ್ಲ. ದಲಿತರ ಮನೆಯಲ್ಲಿ ಊಟ ಮತ್ತು ವಾಸ್ತವ್ಯ ಮಾಡಲಿಲ್ಲ.ಹಾಗಾದರೆ ಇನ್ನೆಲ್ಲಿದೆ ಸ್ವಾತಂತ್ರ್ಯ? ಸಮಾನತೆ? ಎಂದು ಸಮಾಜ ಕಲ್ಯಾಣ ಮತ್ತು ಬಂದಿಖಾನೆ ಸಚಿವ ಎ.ನಾರಾಯಣಸ್ವಾಮಿ ವಿಷಾದಿಸಿದರು.
ನಗರದಲ್ಲಿ ಭಾನುವಾರ ಕರ್ನಾಟಕ ಮಾದಿಗ ದಂಡೋರ ಮತ್ತು ಮಾದಿಗ ವಿದ್ಯಾರ್ಥಿ ಪರಿಷತ್ ಏರ್ಪಡಿಸಿದ್ದ ರಾಜ್ಯಮಟ್ಟದ ಮಾದಿಗ ವಿದ್ಯಾರ್ಥಿಗಳ ಶೈಕ್ಷಣಿಕ ಜಾಗೃತಿ ಸಮಾವೇಶ ಮತ್ತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಶತಮಾನ ಕಳೆದರೂ ಶೋಷಣೆಯಿಂದ ಮುಕ್ಕಿ ಸಿಕ್ಕಿಲ್ಲ. ಇಡೀ ಸಮಾಜದಲ್ಲಿ ಸುಧಾರಣೆ ಕಾಣಬೇಕಾದರೆ, ಸಮಾಜ ಕಲ್ಯಾಣ ಇಲಾಖೆಯೊಳಗೆ ಭಾರಿ ಬದಲಾವಣೆ ಆಗಬೇಕು. ಇಂತಹ ಬದಲಾವಣೆಗಾಗಿಯೇ ಇಲಾಖೆಯ ಬೀಗವನ್ನು ಈಗಷ್ಟೆ ತೆಗೆದಿದ್ದೇನೆ ಎಂದು ಮಾರ್ಮಿಕವಾಗಿ ತಿಳಿಸಿದರು.
ದಲಿತ ಮತ್ತು ಹಿಂದುಳಿದವರಿಗೆ ಶೋಷಣೆಯಿಂದ ಮುಕ್ತಿ ಸಿಗಬೇಕಾದರೆ ಪ್ರತಿಭೆ, ವಿದ್ಯೆ ತಮ್ಮದಾಗಿಸಿಕೊಳ್ಳಬೇಕು. ಉನ್ನತ ಹುದ್ದೆ ಅಲಂಕರಿಸುವ ಸಂಕಲ್ಪ ಮಾಡಬೇಕು ಎಂದು ಸಲಹೆ ಮಾಡಿದರು.