ಶಿಮ್ಲಾ (ಐಎಎನ್ಎಸ್): ತೀವ್ರ ಹಿಮಪಾತದಿಂದಾಗಿ ಹಿಮಾಚಲ ಪ್ರದೇಶದ ಕಿನ್ನಾವುರ್ ಜಿಲ್ಲೆಯಲ್ಲಿ ರಸ್ತೆಗಳು ಬಂದ್ ಆದ ಕಾರಣ ಪಶ್ವಿಮ ಬಂಗಾಳದ ಸುಮಾರು 100 ಮಂದಿ ಪ್ರವಾಸಿಗರು ಸಿಲುಕಿದ್ದಾರೆ. ಎಲ್ಲಾ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ. ಆದರೆ ಆಹಾರ ಮತ್ತು ಅಗತ್ಯ ವಸ್ತುಗಳ ತೀವ್ರ ಕೊರತೆ ಉಂಟಾಗಿದೆ.
’ ತೀವ್ರ ಹಿಮಪಾತದಿಂದಾಗಿ ಬಹುತೇಕ ರಸ್ತೆಗಳು ಬಂದ್ ಆಗಿದ್ದು ಗುರುವಾರದಿಂದ ಸುಮಾರು 100 ಮಂದಿ ಪ್ರವಾಸಿಗರು ಕಲ್ಪ ಪಟ್ಟಣದಲ್ಲಿ ಸಿಲುಕಿದ್ದಾರೆ’ ಎಂದು ರೆಕಾಂಗ್ ಪೀಯೋ ದಲ್ಲಿ ಆಯೋಜಿಸಲಾಗಿರುವ ಸರ್ಕಾರಿ ಅಧಿಕಾರಿ ದೂರವಾಣಿ ಮೂಲಕ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಕಳೆದ ಎರಡು ದಿನದಲ್ಲಿ ದಾಖಲೆ ಐದು ಅಡಿಗೂ ಹೆಚ್ಚು ಹಿಮ ಬಿದ್ದಿದೆ ಎಂದು ಅವರು ತಿಳಿಸಿದ್ದಾರೆ.
‘ಆಹಾರ ಪದಾರ್ಥಗಳ ತೀವ್ರ ಕೊರತೆ ಇದೆ. ವಿದ್ಯುತ್ ಕಡಿತಗೊಂ ಡಿದ್ದು ಸಂಪರ್ಕ ಸೌಲಭ್ಯವೂ ಕಡಿತಗೊಂಡಿದೆ’ ಎಂದು ಅವರು ತಿಳಿಸಿದ್ದಾರೆ. ತೀವ್ರ ಹಿಮಪಾತದಿಂದಾಗಿ ಸುಮಾರು 20 ಮಂದಿ ಪ್ರವಾಸಿಗಳು ಸಂಗ್ಲ ಕಣಿವೆಯಲ್ಲಿ ಸಿಲುಕಿದ್ದಾರೆ ಎಂದು ವರದಿಗಳು ತಿಳಿಸಿವೆ.
ರೆಕಾಂಗ್ ಪೀಯೋ ಮತ್ತು ಶಿಮ್ಲ ಸಂಪರ್ಕ ರಸ್ತೆ ಹಲವೆಡೆ ಹಾನಿಗೊಳಗಾಗಿದ್ದು ಪ್ರವಾಸಿಗರಿಗೆ ತಮ್ಮ ತಾಣ ತಲುಪಲು ಒಂದು ಅಥವಾ ಎರಡು ದಿನ ಬೇಕಾಗಬಹುದು ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುರುವಾರ ಬೆಳಿಗ್ಗೆಯಿಂದ ಕಿನ್ನಾ ವುರ್, ಲಹಾವುಲ್, ಸ್ಪಿಟಿ, ಕುಲು ಮತ್ತು ಚಂಬಾ ಜಿಲ್ಲೆಗಳಲ್ಲಿ ತೀವ್ರ ಹಿಮಪಾತವಾಗಿದೆ ಎಂದು ಹವಾ ಮಾನ ಇಲಾಖೆ ತಿಳಿಸಿದೆ.
ಹಿಮಪಾತ : 400 ಜನರ ರಕ್ಷಣೆ
ಶ್ರೀನಗರ (ಪಿಟಿಐ): ತೀವ್ರ ಹಿಮಪಾತದಿಂದಾಗಿ ಕಾಶ್ಮೀರದ ಹೆಬ್ಬಾಗಿಲು ಕಾಜಿಗುಂಡ್ ಬಳಿ ಜವಾಹರ್ ಸುರಂಗದಲ್ಲಿ ಸಿಲುಕಿದ್ದ 400 ಜನರನ್ನು ಸೇನೆ ಸಹಕಾರದಿಂದ ಸ್ಥಳೀಯ ಆಡಳಿತ ಪಾರು ಮಾಡಿದೆ. ತೀವ್ರ ಹಿಮಪಾತದಿಂದಾಗಿ 2.6 ಕಿ.ಮೀ. ಸುರಂಗದಲ್ಲಿ ಸುಮಾರು 75 ವಾಹನಗಳಲ್ಲಿ ಸಿಲುಕಿಕೊಂಡಿದ್ದ ಜನರನ್ನು ಅಪಾಯದಿಂದ ಪಾರು ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.
ಸುರಂಗದಿಂದ ಹೊರಕ್ಕೆ ಕರೆತಂದ ಜನರನ್ನು ಅನಂತನಾಗ್ ಜಿಲ್ಲೆಯ ಕಾಜಿಗುಂಡ್ಗೆ ಕಳುಹಿಸಲಾಯಿತು. ಕಾಜಿಗುಂಡ್ ಮತ್ತು ಜವಾಹರ್ ಸುರಂಗ ಮಾರ್ಗದಲ್ಲಿ ಹಿಮಪಾತವಾದ ಕಾರಣ ಕಾಶ್ಮೀರ ಕಣಿವೆಯನ್ನು ದೇಶದ ಇತರೆಡೆಗೆ ಸಂಪರ್ಕಿಸುವ 294 ಕಿ.ಮೀ. ಉದ್ದದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ.
‘ಸೇನೆ ಮತ್ತು ಸ್ಥಳೀಯ ಆಡಳಿತದ ಪ್ರಾಮಾಣಿಕ ಸಹಕಾರವಿಲ್ಲದಿದ್ದರೆ ನಾವು ವಿಧಿಗೆ ಶರಣಾಗಬೇಕಿತ್ತು’ ಎಂದು ಕುಟುಂಬದೊಂದಿಗೆ ಸುರಂಗದಲ್ಲಿ ಸಿಲುಕಿದ್ದ ಆರ್.ಕೆ. ಶರ್ಮ ಹೇಳಿದ್ದಾರೆ.
ಇಬ್ಬರು ಲಘೂಷ್ಣತೆ (ದೇಹದಲ್ಲಿ ಅಗತ್ಯಕ್ಕಿಂತ ಕಡಿಮೆ ಪ್ರಮಾಣದ ಉಷ್ಣತೆ ಇರುವುದು) ಸಮಸ್ಯೆಯಿಂದ ಬಳಲುತ್ತಿದ್ದು ಅವರನ್ನು ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕಕ್ಕೆ ಸೇರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.