ಶಿವಮೊಗ್ಗ: ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟದ ಮಹಿಳಾ ಕಾರ್ಮಿಕರಿಗೆ ಕಾನೂನು ಬದ್ಧ ಕನಿಷ್ಠ ವೇತನ ಮೂರು ಸಾವಿರ ರೂಪಾಯಿ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಒಕ್ಕೂಟದ ಸದಸ್ಯರು ಎಐಟಿಯುಸಿ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸದ್ಯ ಈ ಕಾರ್ಮಿಕರಿಗೆ ಒಂದು ಸಾವಿರ ರೂಪಾಯಿ ವೇತನ ನಿಗದಿಯಾಗಿದ್ದು, ಇದು ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಆದ್ದರಿಂದ ವೇತನ ಹೆಚ್ಚಳ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಯೋಜನೆಯಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಮಹಿಳೆಯರು ಬಡವರು, ಕೆಲವರು ವಿಧವೆಯರು ಬಡತನ ರೇಖೆಗಿಂತ ಕೆಳಗಿರುವವರೇ ಆಗಿದ್ದಾರೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇವರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅಲ್ಲದೇ, ಕಾರ್ಮಿಕರಿಗೆ ಕಾನೂನು ಬದ್ಧ ಭವಿಷ್ಯ ನಿಧಿ, ಆಸ್ಪತ್ರೆ ಸೌಲಭ್ಯ, ರಜಾ, ಪಿಂಚಣಿ ಇತ್ಯಾದಿ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಅಕ್ಷರ ದಾಸೋಹ ಬಿಸಿಯೂಟ ಯೋಜನೆಯನ್ನು ಈಗಾಗಲೇ ಬೆಂಗಳೂರು, ಧಾರವಾಡ ಜಿಲ್ಲೆಗಳಲ್ಲಿ ಖಾಸಗೀಕರಣ ಮಾಡಿದ್ದು, ಅದನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಸಂಘದ ಪದಾಧಿಕಾರಿಗಳಾದ ಡಿ.ಸಿ. ಮಾಯಣ್ಣ, ಬಿ. ಶಂಕರಪ್ಪ, ಪರಮೇಶ್ ಕೆ. ಹೊಸಕೊಪ್ಪ, ಸುಶೀಲಮ್ಮ ಬಲೇಗಾರು, ಮಂಜುಳಮ್ಮ ಆನವಟ್ಟಿ, ವಿನೋದಮ್ಮ ಹೊಸನಗರ, ಬಿ.ಎಲ್. ಗೀತಾ ತೀರ್ಥಹಳ್ಳಿ, ಕೆಂಪಮ್ಮ ಶಿವಮೊಗ್ಗ, ಸೌಭಾಗ್ಯಾ ಭದ್ರಾವತಿ, ರಾಜಪ್ಪ ಆನವೇರಿ ಮತ್ತಿತರರು ವಹಿಸಿದ್ದರು.