ಸಕಲೇಶಪುರ: ಇಲ್ಲಿನ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯಲ್ಲಿ ಖಾಲಿ ಇರುವ ತಜ್ಞ ವೈದ್ಯರ ಹುದ್ದೆಗಳನ್ನು ಶೀಘ್ರ ನೇಮಕ ಮಾಡಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.
ಸೋಮವಾರ ರಾತ್ರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ಆಸ್ಪತ್ರೆಯ ಸಮಸ್ಯೆಗಳನ್ನು ಖುದ್ದು ಪರಿಶೀಲಿಸಿದ ನಂತರ ಆಡಳಿತಾಧಿಕಾರಿ ಡಾ.ಇಂದೂಶೇಖರ್ ಅವರೊಂದಿಗೆ ಸಚಿವರು ಚರ್ಚೆ ನಡೆಸಿದರು.
ಇದೇ ಸಂದರ್ಭದಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಮಲ್ನಾಡ್ ಮಹಬೂಬ್, ಆಸ್ಪತ್ರೆಯ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು. ಕೊರತೆ ಇರುವ ತಜ್ಞ ವೈದ್ಯರು, ದಾದಿಯರು, ಡಿ ದರ್ಜೆ ನೌಕರರರನ್ನು ಶೀಘ್ರ ನೇಮಕ ಮಾಡಬೇಕು.
ತುರ್ತುಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡುವ ಯಂತ್ರೋಪರಣಗಳು, ಅಗತ್ಯ ಔಷಧಿ ಹಾಗೂ ಇತರ ಸವಲತ್ತುಗಳನ್ನು ಒದಗಿಸಬೇಕು. ಆಸ್ಪತ್ರೆಯಲ್ಲಿ ಗಾಳಿ, ಬೆಳಕು, ರಾತ್ರಿ ಎಲ್ಲ ವಾರ್ಡ್ಗಳು, ಕಾರಿಡಾರ್ ಹಾಗೂ ಆಸ್ಪತ್ರೆಯ ಮುಂಭಾಗ ವಿದ್ಯುತ್ ದೀಪಗಳ ವ್ಯವಸ್ಥೆ ಆಗಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸ್ವಚ್ಛತೆ ವ್ಯವಸ್ಥೆ ಮಾಡಬೇಕು ಎಂದು ಸಚಿವರನ್ನು ಆಗ್ರಹಿಸಿದರು.
ಆಸ್ಪತ್ರೆಯ ಎಲ್ಲ ವಾರ್ಡ್ಗಳನ್ನು ವೀಕ್ಷಣೆ ಮಾಡಿ, ಸಾರ್ವಜನಿಕರು ಹಾಗೂ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯೊಂದಿಗೆ ಸುಮಾರು 20 ನಿಮಿಷ ಕಾಲ ಸಚಿವರು ಚರ್ಚಿಸಿದರು.
ಸ್ಥಳೀಯವಾಗಿ ಇರುವ ಎಂಬಿಬಿಎಸ್ ಪದವಿಧರ ಹಾಗೂ ತಜ್ಞ ವೈದ್ಯರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವುದಕ್ಕೆ ತಕ್ಷಣದಿಂದಲೇ ಗುತ್ತಿಗೆ ಆದಾರದಲ್ಲಿ ನೇಮಕ ಮಾಡಿಕೊಳ್ಳಲಾಗುವುದು. ಅಂತಹ ವೈದ್ಯರು ಲಭ್ಯವಿದ್ದರೆ ಕೂಡಲೇ ಸಂಪರ್ಕಿಸಿ ನೇಮಕ ಮಾಡಿಕೊಂಡು ವರದಿ ನೀಡುವಂತೆ ವೈದ್ಯಾಧಿಕಾರಿ ಡಾ.ಇಂದೂಶೇಖರ್ ಅವರಿಗೆ ಹೇಳಿದರು.
ಆಸ್ಪತ್ರೆಯಲ್ಲಿ ಕೊರತೆ ಇರುವುದನ್ನು ಬದಿಗಿಟ್ಟು ಇರುವ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸಿ ಸಾರ್ವಜನಿಕರ ವಿಶ್ವಾಸ ಗಳಿಸುವಂತೆ ವೈದ್ಯರಿಗೆ ಕಿವಿಮಾತು ಹೇಳಿದರು.