ದಾವಣಗೆರೆ: ನಗರ ಹಾಗೂ ಗ್ರಾಮಾಂತರ ಪ್ರದೇಶದ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸುವಂತೆ ಒತ್ತಾಯಿಸಿ ಜಿಲ್ಲಾ ಸಂಯುಕ್ತ ಜನತಾದಳ ಅಲ್ಪ ಸಂಖ್ಯಾತರ ಘಟಕದ ವತಿಯಿಂದ ಈಚೆಗೆ ಜಿಲ್ಲಾಧಿಕಾರಿ ಎಸ್. ಪಟ್ಟಣಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯಾದ್ಯಂತ ಸಾರ್ವಜನಿಕರಿಗೆ ಕೆರೆ, ನದಿ, ನಾಲೆ, ಕೊಳವೆಬಾವಿ ಮೂಲಗಳಿಂದ ಕುಡಿಯುವ ನೀರೊದಗಿಸಲಾಗುತ್ತಿದೆ. ಆದರೆ, ಅದು ಶುದ್ಧೀಕರಣವಾಗದೇ ವಿಷಯುಕ್ತವಾಗಿ ಸರಬರಾಜಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದಿನ ಬಜೆಟ್ನಲ್ಲಿ ಸಾರ್ವಜನಿಕರಿಗೆ ಪ್ರತಿ ಮನೆಗೆ ಉಚಿತ `ಫಿಲ್ಟರ್~ ಒದಗಿಸುವ ಬಗ್ಗೆ ಚಿಂತನೆ ನಡೆಸಬೇಕು. ಆಗ ಶೇ. 20ರಷ್ಟು ಸಾಂಕ್ರಾಮಿಕ ಕಾಯಿಲೆಗಳು ಕಡಿಮೆಯಾಗುತ್ತವೆ. ಆದ್ದರಿಂದ, ಜನರ ಹಿತ ಕಾಯಲು ಸರ್ಕಾರ ಮುಂದಾಗಬೇಕು ಎಂದು ಘಟಕದ ಅಧ್ಯಕ್ಷ ಮುದ್ದಾಪುರದ ರಹಮಾನ್ ಮನವಿಯಲ್ಲಿ ಕೋರಿದರು.
ಕೃಷ್ಣಾಜಿ ರಾವ್, ಎಸ್.ಎ. ನಾಗರಾಜ್, ಪ್ರತಿಭಾ ಪಟೇಲ್, ರಜಿಯಾ ಬೇಗಂ, ಸಿಗ್ಲಿ ಹುಸೇನ್ಸಾಬ್ ಮುಂತಾದವರು ಭಾಗವಹಿಸಿದ್ದರು.