ಬೆಂಗಳೂರು: ಪದವಿಪೂರ್ವ ಕಾಲೇಜುಗಳ ಬೋಧನಾ ಶುಲ್ಕ ಏರಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ವಿರೋಧಿಸಿ ಭಾರತ ವಿದ್ಯಾರ್ಥಿ ಸಂಘಟನೆಯ (ಎಸ್ಎಫ್ಐ) ಸದಸ್ಯರು ನಗರದ ಪುರಭವನದ ಎದುರು ಸರ್ಕಾರದ ಪ್ರತಿಕೃತಿ ದಹಿಸಿ ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಎನ್.ಅನಂತ ನಾಯ್ಕ, ‘ಸರ್ಕಾರ ಪದವಿಪೂರ್ವ ಕಾಲೇಜುಗಳ ಶುಲ್ಕದಲ್ಲಿ ಶೇ 20ರಷ್ಟು ಏರಿಕೆ ಮಾಡಿ ಆದೇಶ ಹೊರಡಿಸಿದೆ. ಪ್ರವೇಶ ಶುಲ್ಕ, ಗ್ರಂಥಾಲಯ ಶುಲ್ಕ, ಬೋಧನಾ ಶುಲ್ಕ ಸೇರಿದಂತೆ ಎಲ್ಲ ಶುಲ್ಕಗಳನ್ನು ಶೇ 20ರಷ್ಟು ಹೆಚ್ಚಿಸಲು ಆದೇಶಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಲಿದೆ. ಇತರ ರಾಜ್ಯಗಳಲ್ಲಿ ಪದವಿಹಂತದ ತನಕ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟ್ಯಾಪ್, ಬಸ್ ಪಾಸ್ ನೀಡಲಾಗುತ್ತಿದೆ’ ಎಂದರು.
ಶ್ರುತಿ ನೆಲಮಾಕನಹಳ್ಳಿ, ಚಿಕ್ಕರಾಜು, ಯುವರಾಜ, ಹನುಮಂತ ದುರ್ಗದ, ವೆಂಕಟೇಶ್, ಶ್ರೀನಿವಾಸ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ನಗರದ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.