ಸುರಪುರ: ಶೂನ್ಯ ಉಳಿಮೆ ಕೂರಿಗೆ ಪದ್ಧತಿ (ಡಿ.ಎಸ್.ಆರ್.) ಹೊಸದೇನಲ್ಲ. ಸಾಮಾನ್ಯವಾಗಿ ಹೆಚ್ಚು ಮಳೆ ಬೀಳುವ ಪಶ್ಚಿಮ ಘಟ್ಟ ಪ್ರದೇಶದ ಜಮೀನುಗಳಲ್ಲಿ ಈ ಪದ್ಧತಿ ಕಾಣಸಿಗುತ್ತದೆ. ಕೃಷ್ಣಾ ಮೇಲ್ದಂಡೆ ಪ್ರದೇಶದಲ್ಲಿ ಈಗ ಹೆಚ್ಚಾಗಿ ಬೆಳೆಯುತ್ತಿರುವ ಬತ್ತ ಕೃಷಿಗೆ ಈ ಪದ್ಧತಿಯನ್ನು ಅಳವಡಿಸಿಕೊಳ್ಳಬಹುದು. ಇದರಿಂದ ಖರ್ಚು ಕಡಿಮೆ ಮತ್ತು ಇಳುವರಿ ಹೆಚ್ಚು ಎಂದು ಕೃಷಿ ವಿಜ್ಞಾನಿ ಡಾ. ಪ್ರಕಾಶ ಕುಚನೂರ ಮಾಹಿತಿ ನೀಡಿದರು.
ತಾಲ್ಲೂಕಿನ ಹಾವಿನಾಳ ಗ್ರಾಮದ ಶ್ರೀನಾಥ ಸತ್ಯನಾರಾಯಣ ಎಂಬುವವರ ಜಮೀನಿನಲ್ಲಿ ಭೀಮರಾಯನಗುಡಿಯ ಕೃಷಿ ಮಹಾವಿದ್ಯಾಲಯದ ಗ್ರಾಮೀಣ ಕೃಷಿ ಕಾರ್ಯಾನುಭವದ ವಿದ್ಯಾರ್ಥಿಗಳು ಗುರುವಾರ ಏರ್ಪಡಿಸಿದ್ದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹದಗೊಳಿಸದೆ ಇರುವ ಜಮೀನಿನಲ್ಲಿಯೂ ಈ ಪದ್ಧತಿಯನ್ನು ಅಳವಡಿಸಿಕೊಳ್ಳಬಹುದು. ಇದು ಪ್ರತಿ ಎಕರೆಗೆ ರೂ. 5 ಸಾವಿರ ಖರ್ಚನ್ನು ಉಳಿತಾಯ ಮಾಡುತ್ತದೆ.
ಬಿತ್ತನೆಯ ಬೀಜ ಮತ್ತು ಬತ್ತ ನಾಟಿ ಮಾಡುವ ಖರ್ಚು ಗಣನೀಯವಾಗಿ ಕಡಿಮೆಯಾಗುತ್ತದೆ. ಸಸಿ ಮಾಡಿ ಮಾಡುವ ಮತ್ತು ಮುಖ್ಯ ಮಡಿಗೆ ಸಾಗಿಸುವ ಅವಶ್ಯಕತೆ ಇರುವುದಿಲ್ಲ ಎಂದು ವಿವರಿಸಿದರು.
ಈ ಪದ್ಧತಿಯನ್ನುಅಳವಡಿಸಿಕೊಂಡರೆ ಬತ್ತಕ್ಕೆ ಹೆಚ್ಚಿನ ನೀರಿನ ಅವಶ್ಯಕತೆ ಇರುವುದಿಲ್ಲ. ಈ ಉಳಿಮೆಯಿಂದ ಅಪಾರ ಪ್ರಮಾಣದ ಇಂಧನ ಉಳಿಸಬಹುದು. ಪರಿಸರ ಮಾಲಿನ್ಯ ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಾದ ವೆಂಕಟೇಶ ಜವಳಿ, ಅನಿಲ ಪಾಟೀಲ, ಶಿವಾನಂದ ಪಾಟೀಲ, ಜಿ. ಎಸ್. ಭರತ್, ಗೌಸುದ್ದೀನ್, ಬಾಲಾಜಿ ಮುರುಳಿ, ಪವನಕುಮಾರ ಚಿಮಕೋಡಿ, ಬಿ. ಲೊಕೇಶ, ಧರ್ಮರಾಜ ಹನುಮನಶೆಟ್ಟಿ, ಬಿ. ಎಚ್. ರಾಮನಗೌಡ ಈ ಪದ್ಧತಿಯ ಬಗ್ಗೆ ರೈತರಿಗೆ ಪ್ರಾತ್ಯಕ್ಷಿಕೆ ನೀಡಿದರು. ಹಾವಿನಾಳ, ಲಕ್ಷ್ಮೀಪುರ ಮತ್ತು ಸುತ್ತಮುತ್ತಲಿನ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಪಡೆದರು.