ಬೆಂಗಳೂರು: ನಟಿ ಶೃತಿ ಜತೆಗಿನ ಎರಡನೇ ವಿವಾಹವನ್ನು ಅಸಿಂಧುಗೊಳಿಸುವಂತೆ ಪತ್ರಕರ್ತ ಚಂದ್ರಚೂಡ ಅವರು ಶನಿವಾರ ಕೌಟುಂಬಿಕ ನ್ಯಾಯಾಲಯಕ್ಕೆ ಲಿಖಿತ ಹೇಳಿಕೆ ನೀಡಿದ್ದಾರೆ.
`ಮೊದಲ ಪತ್ನಿಯೊಂದಿಗೆ ದಾಂಪತ್ಯ ಮುಂದುವರಿಸುವ ಪ್ರಶ್ನೆಯೇ ಇಲ್ಲ. ಎರಡನೇ ಮದುವೆ ವಿವಾದದಿಂದ ಸಾಕಷ್ಟು ನೋವುಂಟಾಗಿದೆ. ಮುಂದೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ವಿವಾಹವನ್ನು ಅಸಿಂಧುಗೊಳಿಸಬೇಕೆಂದು ಕೋರುತ್ತಿದ್ದೇನೆ' ಎಂದು ಚಂದ್ರಚೂಡ ಅವರು ತಮ್ಮ ವಕೀಲರ ಮೂಲಕ ಲಿಖಿತ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
`ಪತಿ ನನಗೆ ವಿಚ್ಛೇದನ ನೀಡದೆ, ಎರಡನೇ ಮದುವೆಯಾಗಿದ್ದಾರೆ' ಎಂದು ಚಂದ್ರಚೂಡ ಅವರ ಮೊದಲ ಪತ್ನಿ ಮಂಜುಳಾ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಚಂದ್ರಚೂಡ ಮತ್ತು ಶೃತಿ ಅವರಿಗೆ ನ್ಯಾಯಾಲಯ ಎರಡು ಬಾರಿ ಸಮನ್ಸ್ ನೀಡಿತ್ತು. ಆದರೆ, ದಂಪತಿ ಗೈರು ಹಾಜರಾಗಿದ್ದರು.
ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಆಗಸ್ಟ್ 23ಕ್ಕೆ ಮುಂದೂಡಿದ್ದು, ಆ ದಿನ ಶೃತಿ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ.