ದಾವಣಗೆರೆ: `ಹೊಸ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಂದ ರಾಜ್ಯದ ಆಡಳಿತದಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ~ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುರುವಾರ ಇಲ್ಲಿ ಅಭಿಪ್ರಾಯಪಟ್ಟರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಹೊಸ ಮುಖ್ಯಮಂತ್ರಿಯೇನೂ ದೇವಲೋಕದಿಂದ ಬಂದವರಲ್ಲ~ ಎಂದು ವ್ಯಂಗ್ಯವಾಡಿದರು.
`ಸರ್ಕಾರ ಉರುಳಿಸುವ ಪ್ರಯತ್ನವನ್ನೇನೂ ಕಾಂಗ್ರೆಸ್ ಮಾಡುವುದಿಲ್ಲ. ಈ ಸರ್ಕಾರಕ್ಕೆ 9 ತಿಂಗಳ ಮುನ್ನವೇ ಯಾವುದೇ ಕ್ಷಣದಲ್ಲಿ ಗರ್ಭಪಾತ ಆಗುವ ಸಾಧ್ಯತೆ ಇದೆ. ಸರ್ಕಾರ ಉರುಳಿದರೆ ಕಾಂಗ್ರೆಸ್ ಯಾವುದೇ ಸಂದರ್ಭದಲ್ಲೂ ಚುನಾವಣೆ ಎದುರಿಸಲು ಸಿದ್ಧವಿದೆ~ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
`ಶೆಟ್ಟರ್ ಈ ಹಿಂದೆ ಪಂಚಾಯತ್ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿ ಉತ್ತಮ ಕೆಲಸವೇನೂ ಮಾಡಲಿಲ್ಲ. ಅಲ್ಲದೇ, ಆ ಖಾತೆಯಲ್ಲಿ ಅವರು ಯಶಸ್ಸನ್ನೂ ಕಾಣಲಿಲ್ಲ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಬಿಡುಗಡೆಯಾಗಿದ್ದ ರೂ 550 ಕೋಟಿ ಅನುದಾನಕ್ಕೆ ಅವರು ಇದುವರೆಗೆ ಕ್ರಿಯಾ ಯೋಜನೆಯನ್ನೇ ರೂಪಿಸಿಲ್ಲ. ಹಾಗಾಗಿ, ಅವರಿಂದ ರಾಜ್ಯದ ಆಡಳಿತದಲ್ಲಿ ಯಾವುದೇ ಬದಲಾವಣೆ ನಿರೀಕ್ಷಿಸುವುದು ತಪ್ಪು~ ಎಂದು ಅಭಿಪ್ರಾಯಪಟ್ಟರು.
`ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಲ್ಲ~: `ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ. ಅಂತಹ ಯಾವುದೇ ಪ್ರಸ್ತಾಪವೂ ನನ್ನ ಮುಂದಿಲ್ಲ~ ಎಂದು ಸಿದ್ದರಾಮಯ್ಯ ಹೇಳಿದರು.
`ಈಗ ಕೆಪಿಸಿಸಿಗೆ ಡಾ.ಜಿ. ಪರಮೇಶ್ವರ ಅಧ್ಯಕ್ಷರಾಗಿದ್ದಾರೆ. ಅವರೇ ಮುಂದುವರಿಯಲಿದ್ದಾರೆ. ಒಟ್ಟಾರೆ ಈ ಎಲ್ಲಾ ವಿಚಾರಗಳು ನನಗೆ ಸಂಬಂಧಿಸಿಲ್ಲ. ಈ ಕುರಿತು ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ~ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.