ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 90.11 ಮತದಾನ: ಇಂದು ಫಲಿತಾಂಶ

ಒಕ್ಕಲಿಗರ ಸಂಘದ ಚುನಾವಣೆ: ಮದ್ದೂರಿನಲ್ಲಿ ಹೆಚ್ಚು ಮತದಾನ
Last Updated 6 ಜನವರಿ 2014, 5:05 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯಲ್ಲಿ, ರಾಜ್ಯ ಒಕ್ಕಲಿಗರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ನಾಲ್ಕು ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಶೇ 90.11ರಷ್ಟು ಮತದಾನ ಆಗಿದೆ.

ಮಂಡ್ಯ ತಾಲ್ಲೂಕಿನಲ್ಲಿ ಶೇ 88.13. ಮದ್ದೂರು ಶೇ 91.92, ಮಳವಳ್ಳಿ ಶೇ 91.22, ಪಾಂಡವಪುರ ಶೇ 89.81, ಶ್ರೀರಂಗಪಟ್ಟಣ ಶೇ 90.59, ಕೃಷ್ಣರಾಜಪೇಟೆ ಶೇ 88.68 ಹಾಗೂ ನಾಗಮಂಗಲದಲ್ಲಿ ಶೇ 91.64ರಷ್ಟು ಮತ ಚಲಾವಣೆಯಾಗಿದೆ.

ಜಿಲ್ಲೆಯಲ್ಲಿನ ಬಹುತೇಕ ಎಲ್ಲ ಮತಗಟ್ಟೆಗಳಲ್ಲೂ ಬೆಳಗಿನಿಂದಲೇ ಬಿರುಸಿನ ಮತದಾನ ಆರಂಭವಾದರೆ, ಮತ್ತೆ ಕೆಲವು ಮತಗಟ್ಟೆಗಳಲ್ಲಿ ಮಧ್ಯಾಹ್ನದ ನಂತರ ಚುರುಕುಗೊಂಡಿತು.

ಒಟ್ಟು 37,881 ಮತದಾರರ ಪೈಕಿ 34,138 ಮತದಾರರು ಹಕ್ಕು ಚಲಾಯಿಸಿದ್ದಾರೆ. ಇವರಲ್ಲಿ 5,996 ಮಹಿಳೆಯರು ಸೇರಿದ್ದಾರೆ ಎಂದು ಚುನಾವಣಾಧಿಕಾರಿ ಪಿ. ಶಶಿಧರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮಂಡ್ಯದಲ್ಲಿ 24, ಮದ್ದೂರಿನಲ್ಲಿ 17, ನಾಗಮಂಗಲದಲ್ಲಿ 14, ಮಳವಳ್ಳಿಯಲ್ಲಿ 7 ಹಾಗೂ ಪಾಂಡವಪುರ, ಶ್ರೀರಂಗಪಟ್ಟಣ ಮತ್ತು ಕೃಷ್ಣರಾಜಪೇಟೆಯಲ್ಲಿ ತಲಾ 3 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.

ಮಂಡ್ಯದಲ್ಲಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು (ಕಲ್ಲುಕಟ್ಟಡ), ಮದ್ದೂರಿನಲ್ಲಿ ಎಚ್‌.ಕೆ. ವೀರಣ್ಣ ಗೌಡ ಕಾಲೇಜು, ಮಳವಳ್ಳಿಯಲ್ಲಿ ಸರ್ಕಾರಿ ಬಾಲಕರ ಮಾಧ್ಯಮಿಕ ಶಾಲೆ, ನಾಗಮಂಗಲ, ಪಾಂಡಪವಪುರ ಮತ್ತು ಶ್ರೀರಂಗಪಟ್ಟಣದಲ್ಲಿ ಅಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಹಾಗೂ ಕೃಷ್ಣರಾಜಪೇಟೆಯಲ್ಲಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ 8 ರಿಂದ ಸಂಜೆ 4ರ ವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಮನವೊಲಿಕೆ ಯತ್ನ: ಮತಕೇಂದ್ರದ ಬಳಿ ಅಭ್ಯರ್ಥಿಗಳು–ಬೆಂಬಲಿಗರು, ಮತದಾರರ ಮನವೊಲಿಸುವ ಕಡೇ ಕ್ಷಣದ ಪ್ರಯತ್ನಕ್ಕೆ ಮುಂದಾಗಿದ್ದರು. ಬಿಸಿಲಿನ ತಾಪದಿಂದ ಪಾರಾಗಲು ಅಲ್ಲಲ್ಲಿ ಶಾಮಿಯಾನ ಹಾಕಲಾಗಿತ್ತು. ಅಭ್ಯರ್ಥಿಗಳು ತಮ್ಮ ಬೆಂಬಲಿಗರಿಗೆ ಊಟ, ತಿಂಡಿ ವ್ಯವಸ್ಥೆ ಮಾಡಿದ್ದರು.

ಪೊಲೀಸ್‌ ಪಹರೆ: ಅಹಿತರ ಘಟನೆಗಳು ಜರುಗದಂತೆ ತಡೆಯಲು ಮುನ್ನೆಚ್ಚರಿಕೆಯಾಗಿ ಎಲ್ಲ ಮತಗಟ್ಟೆಗಳ ಬಳಿ ಪೊಲೀಸ್‌ ಪಹರೆಯನ್ನು ಬಿಗಿಗೊಳಿಸಲಾಗಿತ್ತು. ಜಿಲ್ಲಾ ಚುನಾವಣಾಧಿಕಾರಿ ಹಾಗೂ ಪೊಲೀಸ್‌ ಅಧಿಕಾರಿಗಳು ಮತಕೇಂದ್ರಗಳ ಬಳಿ ಸುತ್ತಹಾಕಿ ಪರಿಸ್ಥಿತಿ ಅವಲೋಕಿಸಿದರು.

ಸಂಚಾರ ತ್ರಾಸ: ಮೈಸೂರು–ಬೆಂಗಳೂರು ಹೆದ್ದಾರಿಯಲ್ಲಿ ಸಂಚಾರಕ್ಕೆ ಸಾಕಷ್ಟು ಅನಾನುಕೂಲ ಆಯಿತು. ಪರಿಣಾಮ, ವಾಹನಗಳ ಸಾಲು ಸಾಕಷ್ಟು ಉದ್ದವಿತ್ತು. ಸಂಚಾರಿ ಪೊಲೀಸರು ಪರಿಸ್ಥಿತಿ ನಿಭಾಯಿಸಲು ಸಾಕಷ್ಟು ಹೆಣಗಬೇಕಾಯಿತು. ವಾಹನಗಳು ಪಾದಚಾರಿ ರಸ್ತೆಯನ್ನು ಅತಿಕ್ರಮಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT