ಬೆಂಗಳೂರು: ‘ನೀವು ಇದೇ ರೀತಿ ಕಠಿಣ ಕ್ರಮಗಳನ್ನು ತೆಗೆದು ಕೊಂಡರೆ ನಿಮಗೂ ಆ ಮಹಾರಾಷ್ಟ್ರ ಹೆಚ್ಚುವರಿ ಜಿಲ್ಲಾಧಿಕಾರಿ ಯಶವಂತ ಸೋನಾವಣೆಗೆ ಆದ ಗತಿಯೇ ಆಗುತ್ತದೆ. ಹುಷಾರ್’!
‘ಹೀಗೆ ಅಪರಿಚಿತ ವ್ಯಕ್ತಿಯೊಬ್ಬ ನನ್ನ ಮೊಬೈಲ್ಗೆ ಇತ್ತೀಚೆಗೆ ದೂರವಾಣಿ ಕರೆ ಮಾಡಿ ಬೆದರಿಸಿದ್ದಾನೆ’ ಎಂದು ಆಹಾರ ಮತ್ತು ಇಂಧನ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.‘ಅಕ್ರಮ ಪಡಿತರ ಚೀಟಿ ಮತ್ತು ಅಡುಗೆ ಅನಿಲ ಸಿಲಿಂಡರ್ಗಳ ದುರ್ಬಳಕೆ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದಕ್ಕೆ ವಿತರಕರಿಂದ ವಿರೋಧ ಇದೆ.
ಈ ಹಿನ್ನೆಲೆಯಲ್ಲಿ ನನ್ನ ಮೇಲೆ ಒತ್ತಡ ಹೆಚ್ಚಾಗಿದೆ. ಇತ್ತೀಚೆಗೆ ಬೆದರಿಕೆ ಕರೆಗಳೂ ಬರುತ್ತಿವೆ’ ಎಂದು ಹೇಳಿದರು.‘ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ. ವ್ಯವಸ್ಥೆ ಸರಿ ಮಾಡುವುದೇ ನನ್ನ ಧ್ಯೇಯ. ಆ ನಿಟ್ಟಿನಲ್ಲಿ ಕೆಲಸ ಮಾಡುವೆ’ ಎಂದು ನುಡಿದರು.
ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ್ದು ಯಾರು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಬೆದರಿಕೆ ಕರೆ ಬಂದ ತಕ್ಷಣ ಅದನ್ನು ತನಿಖೆ ಮಾಡಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಪ್ರಾಥಮಿಕ ತನಿಖೆ ಪ್ರಕಾರ ಎಸ್.ಟಿ.ಡಿ ಬೂತ್ನಿಂದ ಬೆದರಿಕೆ ಕರೆ ಬಂದಿದೆ ಎಂದರು.