ಸಪ್ತಕ ಹಾಗೂ ಮಲ್ಲೇಶ್ವರದ ಎಂ.ಇ.ಎಸ್. ಕಲಾವೇದಿ ಆಶ್ರಯದಲ್ಲಿ ಕಳೆದ ಶನಿವಾರ ನಡೆದ ಇಂದಿರಾ ಮತ್ತು ನಾರಾಯದಾಸ್ ನೆನಪಿನ ಸಂಗೀತ ಕಾರ್ಯಕ್ರಮ ಕಲಾಭಿಮಾನಿಗಳಿಗೆ ರಸದೌತಣ ನೀಡುವಲ್ಲಿ ಯಶಸ್ವಿಯಾಯಿತು.
ಗೋಪಾಲಕೃಷ್ಣ ಭಾಗವತ ಯಲ್ಲಾಪುರ ಅವರು ಪೂರಿಯಾ ಕಲ್ಯಾಣ್ ರಾಗದಲ್ಲಿ ಪರಂಪರಾನುಗತ ಬಂಧಿಶ್ `ಆಜಸೋಬನ'ದಲ್ಲಿ ವಿಸ್ತಾರವಾಗಿ ಆಲಾಪ ಮಾಡಿ ಆಕರ್ಷಕ ಬೋಲ್ತಾನ್ ಹಾಗೂ ತಾನ್ಗಳೊಂದಿಗೆ ಹಾಡಿ ಧ್ರುತ್ ತೀನ್ತಾಲ್ದಲ್ಲಿ `ಬಹುತ ದಿನ ಬಿತೇ'ಯನ್ನು ಸುಂದರವಾಗಿ ಪ್ರಸ್ತುತಪಡಿಸಿದರು.
ನಂತರ ಶ್ರೋತೃಗಳ ಕೋರಿಕೆಯಂತೆ ಹಾಡಿದ ಋತು ರಾಗ ಮಿಯಾ ಮಲ್ಹಾರ್ದಲ್ಲಿ `ಬರಸನ ಲಾಗೆ ಬುಂದರಿಯಾ' ಸ್ವರ ಲಯಗಳ ಸಂಗಮದಲ್ಲಿ ಸುಂದರವಾಗಿ ಮೂಡಿ ಬಂದಿತು.
`ಅಂತರಂಗದಲ್ಲಿ ಅರಿವಾದೊಡೇನು' ಹಾಗೂ `ನೀರಿಗೆ ನೈದಿಲೆಯೇ ಶೃಂಗಾರ', ಭೈರವಿಯಲ್ಲಿನ `ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ' ವಚನಗಳನ್ನು ಸುಶ್ರಾವ್ಯ ಮತ್ತು ಭಾವಪೂರ್ಣವಾಗಿ ಹಾಡಿದರು.
ತಬಲಾದಲ್ಲಿ ಎನ್. ಜಿ. ಹೆಗಡೆ, ಕಪ್ಪೆಕೆರೆ ಹಾಗೂ ಹಾರ್ಮೋನಿಯಂನಲ್ಲಿ ಗಜಾನನ ಸಭಾಹಿತ ಗುಣವಂತೆ ಸಹಕಾರ ನೀಡಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.