ನವದೆಹಲಿ (ಪಿಟಿಐ): ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಷಾ ಅವರ ಮೇಲೆ ಚುನಾವಣಾ ಪ್ರಚಾರ ಮತ್ತು ಸಮಾವೇಶದಲ್ಲಿ ಭಾಗವಹಿಸದಂತೆ ಹೇರಿದ್ದ ನಿಷೇಧವನ್ನು ಚುನಾವಣಾ ಆಯೋಗ ವಾಪಸ್ ಪಡೆದಿರುವುದು ವಿವಾದಕ್ಕೆ ಕಾರಣವಾಗಿದೆ.
ಬಿಜೆಪಿಯ ಆಣತಿಯಂತೆ ಆಯೋಗ ಕೆಲಸ ಮಾಡುತ್ತಿದೆ ಎಂದು ಸಮಾಜವಾದಿ ಪಕ್ಷ (ಎಸ್ಪಿ) ಆರೋಪಿಸಿದೆ. ಆಯೋಗದ ನಿರ್ಧಾರದ ಬಗ್ಗೆ ಕಾಂಗ್ರೆಸ್ ಕೂಡ ಅತೃಪ್ತಿ ವ್ಯಕ್ತಪಡಿಸಿದೆ. ಅಮಿತ್ ಷಾ ಮತ್ತು ಆಯೋಗದಿಂದ ನಿಷೇಧಕ್ಕೆ ಒಳಗಾಗಿರುವ ಇನ್ನೊಬ್ಬ ನಾಯಕ ಎಸ್ಪಿಯ ಅಜಂ ಖಾನ್ ಅವರಿಬ್ಬರೂ ಒಂದೇ ಪ್ರಮಾಣದಲ್ಲಿ ಕೋಮುವಾದಿಗಳಾಗಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
ಆಯೋಗದ ನಿರ್ಧಾರದಿಂದ ಅಜಂ ಖಾನ್ ಅವರು ಕುಪಿತರಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸದಂತೆ ಆಯೋಗ ಹೇರಿರುವ ನಿಷೇಧವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗುವುದು ಎಂದು ಹೇಳಿದ್ದಾರೆ.
ಸೌಹಾರ್ದಕ್ಕೆ ಭಂಗ ಉಂಟಾಗುವ ರೀತಿಯಲ್ಲಿ ಮತ್ತು ಶಾಂತಿ, ಸುವ್ಯವಸ್ಥೆಗೆ ಹಾನಿಯಾಗುವ ರೀತಿಯಲ್ಲಿ ನಡೆದುಕೊಳ್ಳುವುದಿಲ್ಲ ಎಂದು ಅಮಿತ್ ಷಾ ಭರವಸೆ ನೀಡಿದ್ದರಿಂದಾಗಿ ಅವರ ಮೇಲೆ ಹೇರಲಾಗಿದ್ದ ನಿಷೇಧವನ್ನು ಆಯೋಗ ಗುರುವಾರ ಹಿಂದಕ್ಕೆ ಪಡೆದಿದೆ.